ಕೆ.ಆರ್.ನಗರ: ಇತಿಹಾಸ ಪ್ರಸಿದ್ಧ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಗ್ರಾಮದ ಶ್ರೀರಾಮ ದೇವರ ಬ್ರಹ್ಮ ರಥೋತ್ಸವ ನಡೆಯಿತು.
ಧಾರ್ಮಿಕ ದತ್ತಿ ಇಲಾಖೆ ಮತ್ತು ತಾಲೂಕು ಆಡಳಿತ ವತಿಯಿಂದ ಶ್ರೀ ಕೋದಂಡರಾಮ ದೇವರ ಬ್ರಹ್ಮರಥೋತ್ಸವಕ್ಕೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಬೆಳಗ್ಗೆ 11.10 ರಿಂದ 12.10 ಕ್ಕೆ ಬ್ರಹ್ಮರಥೋತ್ಸವ ನಡೆಯಿತು. ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಯಡತೊರೆ ಯೋಗಾನಂದೇಶ್ವರ ಶಂಕರಭಾರತಿ ಸ್ವಾಮೀಜಿ, ಕೆ ಆರ್ ನಗರ ಕಾಗಿನೆಲೆ ಶಾಖಾ ಮಠ ಶಿವಾನಂದಪುರಿ ಸ್ವಾಮೀಜಿ,ಬೆಟ್ಟದಪುರ ವಿರಕ್ತ ಮಠ ಚನ್ನಬಸವದೇಶಿಕೇಂದ್ರ ಸ್ವಾಮಿಜಿ, ಕರ್ಪೂರವಳ್ಳಿ ಜಂಗಮ ಮಠ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು.
ಈಗಾಗಲೇ ರಥ ಚಕ್ರ ಸೇರಿದಂತೆ, ರಥದ ಗುಣಮಟ್ಟವನ್ನು ರಥ ಎಳೆಯುವ ಮೂಲಕ ಪರೀಕ್ಷಿಸಿ, ಕಬ್ಬಿಣದ ಪರಿಕರಗಳನ್ನು ರಥಕ್ಕೆ ಕಟ್ಟಿ, ರಥ ರಸ್ತೆಗೆ ಮರಳನ್ನು ಹರಡಲಾಗಿತ್ತು. ಭದ್ರತೆಗಾಗಿ ದೇಗುಲದಲ್ಲಿ ಮುಖ್ಯ ಪೇದೆ ಸೇರಿದಂತೆ 4 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಉತ್ಸವ ಮೂರ್ತಿಗಳ ಸ್ವಚ್ಚತೆ, ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ಸರತಿ ಸಾಲು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಸರ್ಕಲ್ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್, ಎಎಸ್ಐ ಒಳಗೊಂಡಂತೆ ಸುಮಾರು 180ಕ್ಕೂ ಹೆಚ್ಚು ವಿಶೇಷ ಪಡೆಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.