ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಕಾರ್ಯ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಕಾರ್ಯ ಗ್ರಾಮದ ಸ್ವಾಮಿ ಮಠದ ಅಧ್ಯಕ್ಷರಾದ ಶ್ರೀ ಮಹೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಮುಂಜಾನೆ ಹೊಸ ನೀರು ತಂದು, ದೇವರಿಗೆ ವಿಶೇಷ ಪೂಜೆ, ಹೋಮ-ಹವನ ಮಾಡಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಉತ್ಸವ ಮೂರ್ತಿಗೆ ವಿಶೇಷವಾಗಿ ವಸ್ತ್ರಾಭರಣ, ಬಗೆ ಬಗೆಯ ಪುಷ್ಪಾಲಂಕಾರ ಮಾಡಲಾಗಿತ್ತು. ನಂತರ ಗ್ರಾಮಸ್ಥರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.
ಬಣ್ಣದ ಬಣ್ಣದ ಬಟ್ಟೆಗಳಿಂದ , ಹೂವಿನಿಂದ ಶೃಂಗರಿಸಿದ್ದ, ರಥೋತ್ಸವಕ್ಕೆ ಶ್ರೀ ವೀರಭದ್ರೇಶ್ವರಸ್ವಾಮಿಯನ್ನು ಕುಳ್ಳಿರಿಸಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ, ಇಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳ ವಾದ್ಯದೊಂದಿಗೆ ಸತ್ತಿಗೆ ಸುರಪಾಣಿ, ವೀರಗಾಸೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥವು ಸಾಗಿತು. ಗ್ರಾಮದ ಮಹಿಳೆಯರು ಮನೆ ಮುಂದೆ ರಂಗೋಲಿ ಬಿಡಿಸಿ ರಥೋತ್ಸವಕ್ಕೆ ಸ್ವಾಗತ ಕೋರಿ ಪೂಜೆ ಸಲ್ಲಿಸಿದರು. ನೂತನ ನವ ದಂಪತಿಗಳು ಹಣ್ಣು ಜವನ ಎಸೆದು ಪುನೀತರಾದರು. ಭಕ್ತರು ರಥವನ್ನು ಎಳೆದು ಭಕ್ತಿ ಭಾವ ಮೆರೆದರು. ಬಳಿಕ ರಥವು ಸ್ವಸ್ಥಾನಕ್ಕೆ ಬಂದು ತಲುಪಿತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹುಲ್ಲಹಳ್ಳಿ ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.