ಮೈಸೂರು: ದಕ್ಷಿಣ ಕಾಶಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪಂಚಮಹಾರಥೋತ್ಸವ ಭಾನುವಾರ(ಏ.2)ಅದ್ಧೂರಿಯಾಗಿ ನಡೆದಿದ್ದು, ನೆರೆದಿದ್ದ ಸಹಸ್ರಾರು ಭಕ್ತರು ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿ ಶ್ರೀಕಂಠೇಶ್ವರನ ಕೃಪೆಗೆ ಪಾತ್ರರಾದರು.
ಪಂಚಮಹಾರಥೋತ್ಸವವು ಬೆಳಿಗ್ಗೆ 6ಗಂಟೆಯಿಂದ 6.40ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ದೇವಾಲಯದ ಪ್ರಧಾನ ಆಗಮಿಕ ನೀಲಕಂಠ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದು ಗೌತಮ ರಥಕ್ಕೆ ಚಾಲನೆ ನೀಡಿದರು. ಬಳಿಕ ಶ್ರೀಕಂಠೇಶ್ವರ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಹಾಗೂ ಅಮ್ಮನವರ ರಥಗಳು ಸೇರಿದಂತೆ ಪಂಚರಥಗಳು ನಗರದ ರಾಜಬೀದಿಯಲ್ಲಿ ಸಾಗಿದವು. ಈ ವೇಳೆ ಎರಡು ಬದಿಯಲ್ಲಿ ನೆರೆದ ಭಕ್ತರು, ನವವಧುವರರು ಉಘೇ ಶ್ರೀಕಂಠ ಉದ್ಘೋಷದೊಂದಿಗೆ ಜೈಕಾರ ಮೊಳಗಿಸಿದರು.
ರಾಜಬೀದಿಯಲ್ಲಿ ಸಾಗಿದ ಪಂಚರಥಗಳು ಬಳಿಕ ಸ್ವಸ್ಥಾನಕ್ಕೆ ಮರಳಿದವು ರಾಜ್ಯ ಮತ್ತು ಹೊರರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ರಥೋತ್ಸವದ ಪ್ರಯುಕ್ತ ಏ.4ರಂದು ಮಂಗಳವಾರ ಸಂಜೆ 7ಗಂಟೆಗೆ ಕಪಿಲಾ ನದಿಯಲ್ಲಿ ಅಲಂಕೃತ ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆಯಲಿದೆ. ಅಲ್ಲದೆ ಏ.6ರಂದು ನಂದಿ ವಾಹನೋತ್ಸವದೊಂದಿಗೆ ನಂಜನಗೂಡಿನ ದೊಡ್ಡ ಜಾತ್ರೆಗೆ ತೆರೆಬೀಳಲಿದೆ.