ದೇವಲಾಪುರ: ದೇವಲಾಪುರ ಹೋಬಳಿಯ ಸಾಲಾದ್ರಿ ಕ್ಷೇತ್ರ ಕೋಟೆ ಬೆಟ್ಟದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಜಾತ್ರೆಗೆ ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವದೊಂದಿಗೆ ತೆರೆ ಎಳೆಯಲಾಗಿದೆ.
ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ಸಮೀಪವಿರುವ ಕೋಟೆಬೆಟ್ಟದ ವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವದ ಅಂಗವಾಗಿ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿರುವ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರವನ್ನು ಮಾಡಲಾಗಿತ್ತಲ್ಲದೆ, ಮುಂಜಾನೆಯಿಂದಲೇ ತಾಲ್ಲೂಕಿನ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆದರು. ಇದೇ ವೇಳೆ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತಾಧಿಗಳ ಸಮೂಹದೊಂದಿಗೆ ಜೈಕಾರ ಉದ್ಘೋಷದೊಂದಿಗೆ ರಥೋತ್ಸವ ಸಾಗಿತು.
ರಥೋತ್ಸವದ ಹಿನ್ನಲೆಯಲ್ಲಿ ಗ್ರಾಮದ ಪ್ರತಿ ಮನೆಯಲ್ಲೂ ತೇರು ಒಪ್ಪತ್ತು ಎಂಬ ವಿಶೇಷ ಆಚರಣೆಯನ್ನು ಮಾಡಲಾಗುತ್ತಿದ್ದು ಅದರಂತೆ ಸಿಹಿ ತಿನಿಸುಗಳು ಸೇರಿದಂತೆ ಸಿಹಿ ಊಟವನ್ನು ಮಾಡಿ ದೇವರಿಗೆ ಎಡೆಯಿಡಲಾಯಿತು. ರಥೋತ್ಸವಕ್ಕೆ ವಿವಿಧ ಊರುಗಳಿಂದ ಬಂದಿದ್ದ ಮತ್ತು ಸ್ಥಳೀಯ ಭಕ್ತರಿಗೆ ಅನ್ನದಾನ ಮತ್ತು ಪಾನಕ, ನೀರು ಮಜ್ಜಿಗೆಯನ್ನು ನೀಡಲಾಯಿತು.
ರಥೋತ್ಸವದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಉಪತಹಶೀಲ್ದಾರ್, ರೆವಿನ್ಯೂ ಇನ್ಸ್ಪೆಕ್ಟರ್, ಗ್ರಾಮ ಲೆಕ್ಕಿಗರು ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.