ಮೈಸೂರು: ಆಷಾಢದ ಮಳೆಯಲ್ಲಿ ಮಿಂದೆದ್ದ ಚಾಮುಂಡಿಬೆಟ್ಟ ಪಚ್ಚೆ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದರೆ, ತಾಯಿ ಚಾಮುಂಡೇಶ್ವರಿಯ ವರ್ಧಂತಿಗೆ ದೇಗುಲ ಸರ್ವ ರೀತಿಯಲ್ಲಿ ಶೋಭಿತಗೊಂಡಿದೆ. ಈಗಾಗಲೇ ಮೂರು ಆಷಾಢ ಶುಕ್ರವಾರ ಮಾತ್ರವಲ್ಲದೆ ಇತರೇ ದಿನಗಳಲ್ಲಿಯೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸೋಮವಾರ ನಡೆಯುವ ವರ್ಧಂತಿಗೆ ಸರ್ವ ರೀತಿಯಲ್ಲಿಯೂ ವ್ಯವಸ್ಥೆಗಳನ್ನು ಮಾಡಲಾಗಿದೆ.
ಹಾಗೆ ನೋಡಿದರೆ ಆಷಾಢ ಮಾಸ ಚಾಮುಂಡೇಶ್ವರಿಗೆ ಜನುಮ ತಿಂಗಳ ಸಂಭ್ರಮದ ಕಾಲವಾಗಿದ್ದು, ಈ ಕಾಲದಲ್ಲಿ ತಾಯಿ ಚಾಮುಂಡೇಶ್ವರಿ ತನ್ನನ್ನು ನೋಡಲು ಬರುವ ಭಕ್ತರಿಗಾಗಿಯೇ ನಿಂತಿದ್ದಾಳೆಯೇನೋಎಂಬಂತೆ ಗೋಚರವಾಗುತ್ತಿದೆ. ಈ ಬಾರಿ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಆಷಾಢ ಶುಕ್ರವಾರದಂತೆಯೇ ವರ್ಧಂತಿಗೂ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ವರ್ಧಂತಿ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ದೇವಿಯ ಜನ್ಮದಿನವನ್ನು ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಎಂದು ಆಚರಿಸಲಾಗುತ್ತಿದ್ದು ಈ ಬಾರಿ ಸೋಮವಾರ ರೇವತಿ ನಕ್ಷತ್ರದಲ್ಲಿ ಚಾಮುಂಡಿ ವರ್ಧಂತಿ ನೆರವೇರಲಿದ್ದು, ಬೆಳಗ್ಗೆ 4.30ರಿಂದ ಚಾಮುಂಡೇಶ್ವರಿಗೆ ವಿವಿಧ ಅಭಿಷೇಕ ನೆರವೇರಿಸಲಾಗುತ್ತದೆ.
ವರ್ಧಂತಿ ಮಹೋತ್ಸವದ ಹಿನ್ನಲೆಯಲ್ಲಿ ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ,10 ಗಂಟೆಗೆ ಉತ್ಸವ ಆರಂಭ ಆಗಲಿದೆ. ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥರು ಚಾಲನೆ ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ದರ್ಬಾರ್ ಉತ್ಸವ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ವರ್ಧಂತಿ ಕಾರ್ಯಕ್ರಮ ಕುರಿತಂತೆ ಮಾಹಿತಿ ನೀಡಿದ ದೇಗುಲದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಅವರು, ಆಷಾಢ ಕೃಷ್ಣ ಪಕ್ಷ, ರೇವತಿ ನಕ್ಷತ್ರದಂದು ಚಾಮುಂಡಿ ಬೆಟ್ಟದಲ್ಲಿ ವರ್ಧಂತೋತ್ಸವ ನಡೆಯುವ ಪ್ರತೀತಿ ಆಗಿದೆ. ಅದರಂತೆ ಸೋಮವಾರ ಬೆಳಗ್ಗೆ 4.30 ರಿಂದ ವಿಶೇಷ ಪೂಜೆ, ಅಭಿಷೇಕಗಳು ನಡೆಯಲಿದೆ ಎಂದು ಹೇಳಿದ್ದಾರೆ.
ರಾತ್ರಿ 8 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ದರ್ಬಾರ್ ಉತ್ಸವ ನಡೆದ ಬಳಿಕ ಬರುವ ಭಕ್ತರಿಗೆ ದೇವರ ದರ್ಶನ ಮಾಡಿಸುವುದು ಪದ್ಧತಿಯಾಗಿದೆ ಇನ್ನು ವಿಶೇಷ ಪೂಜೆ, ಹೋಮ ಹವನಗಳೊಂದಿಗೆ ದೇವಿಯ ಮೆರವಣಿಗೆಯನ್ನು ಮಾಡಲಾಗುತ್ತದೆ. ದೇವಿಯ ಜನ್ಮದಿನವನ್ನು ಬೆಳಿಗ್ಗೆಯಿಂದಲೇ ಪ್ರಸಾದ ವಿತರಿಸಲಾಗುತ್ತದೆ. ಚಿನ್ನದ ಪಲ್ಲಕ್ಕಿ ಉತ್ಸವ ಈ ಬಾರಿಯ ವರ್ಧಂತಿಯವಿಶೇಷ ಆಕರ್ಷಣೆಯಾಗಿರಲಿದೆ ಎಂದು ತಿಳಿಸಿದ್ದಾರೆ.
ಇನ್ನು ಚಾಮುಂಡೇಶ್ವರಿ ಬಗ್ಗೆ ಹೇಳಬೇಕೆಂದರೆ ಅದ್ಭುತ ಶಕ್ತಿ ಸ್ವರೂಪಿಣಿ, ಸರ್ವಮಂಗಳ ಪ್ರದಾಯಿಣಿ, ಶ್ರೀ ಗುಣಮಯಿ, ಸೌಭಾಗ್ಯದಾತೆ, ಬೇಡಿದ್ದು ಕರುಣಿಸುವ ವರಧಾಯಿಣಿ, ಮಹಿಷಾಸುರ ಮರ್ಧಿನಿ ತಾಯಿ ಚಾಮುಂಡಿ ನೆಲೆಸಿರುವ ರಮ್ಯ ಮನೋಹರ ತಾಣವಾದ ಚಾಮುಂಡಿಬೆಟ್ಟಕ್ಕೆ ವಿಶೇಷ ಮಹತ್ವವಿದೆ. ಹಾಗಾಗಿ ಪ್ರತಿದಿನವೂ ದೇಶವಿದೇಶಗಳಿಂದ ಸಾಗರದೋಪಾದಿಯಲ್ಲಿ ಭಕ್ತಾಧಿ ಪ್ರವಾಸಿಗರು ಇಲ್ಲಿಗೆ ಬರುವುದುಂಟು. ಬೆಟ್ಟದ ಸಾವಿರ ಮೆಟ್ಟಿಲುಗಳನ್ನೇರಿ ಚಾಮುಂಡಿ ದರ್ಶನಕ್ಕೆ ಬರುವವರೂ ಸಾಗರದೋಪಾದಿಯೇ! ಇಲ್ಲಿಗೆ ಹೇಗೇ ಬಂದಿರಲಿ, ಎಷ್ಟೇ ದೂರದಿಂದ ಬಂದಿರಲಿ, ಎಷ್ಟೇ ದಣಿದಿರಲಿ ಒಂದು ಕ್ಷಣದಲ್ಲಿ ಅದೆಲ್ಲವೂ ಮಾಯವಾಗಿ ಉಲ್ಲಾಸಗೊಳ್ಳುವ ಮಾಯಾಜಾಲ ಇಲ್ಲುಂಟು. ಅದೇ ಈ ಬೆಟ್ಟದ ಮಹಿಮೆ, ದೇವಿ ಚಾಮುಂಡಿಯ ಒಲುಮೆಯಾಗಿದೆ.