ಬೀದರ್: ‘ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ನಿಂದ ನಗರ ಹೊರವಲಯದ ಮಾಮನಕೇರಿಯಲ್ಲಿ ಜನವರಿ 5ರಂದು ಜಗನ್ನಾಥ ದೇವರ ರಥಯಾತ್ರೆ ನಡೆಯಲಿದೆ’ ಎಂದು ಟ್ರಸ್ಟ್ ಪ್ರಮುಖ ವೀರಶೆಟ್ಟಿ ಮಣಗೆ ತಿಳಿಸಿದರು.
ಅಂದು ಮಧ್ಯಾಹ್ನ 1ಕ್ಕೆ ರಥಯಾತ್ರೆ ನಡೆಯಲಿದೆ. ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಥಯಾತ್ರೆಯು ರಾಂಪೂರೆ ಕಾಲೊನಿಯಲ್ಲಿರುವ ಸತ್ಯನಾರಾಯಣ ಮಂದಿರದಿಂದ ಆರಂಭಗೊಂಡು ಜಗನ್ನಾಥ ಮಂದಿರ ವರೆಗೆ ನಡೆಯಲಿದೆ. ಕುಂಭ ಕಲಶ, ಚಕ್ರಿ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಜ. 5ರಿಂದ 8ರ ವರೆಗೆ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಎಂಟು ಕಿ.ಮೀ ವರೆಗೆ ನಡೆಯಲಿರುವ ರಥಯಾತ್ರೆಯಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವರು. ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡುವರು. ಸಿಕಿಂದ್ರಾಬಾದ್ ಇಸ್ಕಾನ್ ದೇವಸ್ಥಾನದ ಅಧ್ಯಕ್ಷ ಸಹದೇವ ದಾಸ್ ಸಾನ್ನಿಧ್ಯ ವಹಿಸುವರು. ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್, ವಿಶ್ವ ಹಿಂದೂ ಪರಿಷತ್ತಿನ ಪ್ರಾಂತಿಯ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣನ್ ಸಾಳೆ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ವಿಶ್ವಹಿಂದೂ ಪರಿಷತ್ತಿನ ಪ್ರಾಂತಿಯ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣನ್ ಸಾಳೆ ಮಾತನಾಡಿ, ಜನವರಿ 5ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1ರ ವರೆಗೆ ಪ್ರತಿದಿನ ಹೋಮ ಹವನ ಜರುಗಲಿದೆ. ಸಂಜೆ 4 ರಿಂದ ಭಜನೆ ಮತ್ತು ಹರಿನಾಮ ಸಂಕೀರ್ತನೆ ಜರುಗಲಿದೆ. ಅನಂತರ ಪ್ರವಚನ, ಉಷಾ ಪ್ರಭಾಕರ್ ಅವರ ತಂಡದಿಂದ ನೃತ್ಯ, ಜಗನ್ನಾಥ ನಾನಕೇರಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ರಾಜಕುಮಾರ ಅಳ್ಳೆ ಮಾತನಾಡಿ , ರಥೋತ್ಸವಕ್ಕಾಗಿ ವಿಶೇಷ ರಥವನ್ನು ಹೈದರಾಬಾದನಿಂದ ತರಿಸಲಾಗುತ್ತಿದೆ. ಜಗನ್ನಾಥ ಪುರಿಯಲ್ಲಿರುವಂತೆ ಆಕರ್ಷಕವಾಗಿದೆ. ನೋಡುಗರ ಕಣ್ಮನ ಸೆಳೆಯಲಿದೆ. ಒಂದು ಕಡೆ ಮಹಿಳೆಯರು ಮತ್ತು ಇನ್ನೊಂದು ಕಡೆ ಪುರುಷರು ಹಗ್ಗದಿಂದ ತೇರು ಎಳೆಯುವರು. ರಥೋತ್ಸವದಲ್ಲಿ ಎಲ್ಲ ಧರ್ಮಿಯರು ಪಾಲ್ಗೊಳ್ಳಬೇಕು. ಭಕ್ತರು ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿ ಬರಬೇಕು ಎಂದು ಮನವಿ ಮಾಡಿದರು.