ಕೊಪ್ಪಳ: ಅಯೋಧ್ಯ ರಾಮಮಂದಿರ ಉದ್ಘಾಟನಗೆ ಕ್ಷಣಗಣನೆ ಶುರುವಾಗಿದೆ. ರಾಮ ಮಂದಿರದಲ್ಲಿ ಎಲ್ಲ ಸಕಲ ಸಿದ್ಧತೆಗಳೂ ನಡೆಯುತ್ತಿದೆ. ರಾಮ ಮಂದಿರ ನಿರ್ಮಾಣದಲ್ಲಿ ಹಲವಾರು ಮಂದಿ ಕೈಜೋಡಿಸಿದ್ದಾರೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಓರ್ವ ಶಿಲ್ಪಿಗೂ ಅಂತಹ ಅವಕಾಶ ದೊರೆತಿದೆ.
ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ಇಪ್ಪತ್ತಾರು ವರ್ಷದ ನಾಗಮೂರ್ತಿಸ್ವಾಮಿ ಪಂಚಾನನಗುರು ಶಿಲ್ಪಿ ರಾಮ ಮಂದಿರದ ಗರ್ಭಗುಡಿ ಮುಂದಿರುವ ಮಂಟಪದ ಕಂಬಗಳ ಕೆತ್ತನೆಯ ಕೆಲಸವನ್ನು ಮಾಡುತ್ತಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಧಾರವಾಡ ಮೂಲದ ಶಿಲ್ಪಿಯಿಂದ ಇಂತಹದೊಂದು ಅವಕಾಶ ಬಂದಾಗ ನಾಗಮೂರ್ತಿ ಸ್ವಾಮಿ ಒಪ್ಪಿಕೊಂಡಿದ್ದಾರೆ. ಇವರು ತಿಂಗಳ ಹಿಂದೆಯೇ ಅಯೋಧ್ಯೆಗೆ ಹೋಗಿ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಂಜಾನೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆವರಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಶಿಲ್ಪ ತಯಾರಿಕೆ, ವಾಸ್ತುಶಿಲ್ಪಗಳ ನಿರ್ಮಾಣ ಕಾರ್ಯ ಮಾಡುತ್ತಿದ್ದ ನಾಗಮೂರ್ತಿ ಸ್ವಾಮಿ ಅವರಿಗೆ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅವಕಾಶ ಸಿಕ್ಕಿರುವುದು ಕುಟುಂಬದಲ್ಲಿ ಸಂತಸದ ವಾತವರಣ ಇದೆ.
ತಮ್ಮ ಕುಟುಂಬಕ್ಕೆ ರಾಮ ಮಂದಿರ ನಿರ್ಮಾಣದಲ್ಲಿಯೇ ಅವಕಾಶ ಸಿಕ್ಕಿರುವುದು, ಸೌಭಾಗ್ಯ ಎಂದು ನಾಗಮೂರ್ತಿ ಸ್ವಾಮಿ ಸಹೋದರ ವಿರುಪಾಕ್ಷಿಸ್ವಾಮಿ ಹೇಳಿದ್ದಾರೆ.
ನಾಗಮೂರ್ತಿ ಸ್ವಾಮಿ ಕುಟುಂಬ ಹಿಂದಿನಿಂದಲೂ ಕೂಡಾ ವಾಸ್ತಶಿಲ್ಪ ಮತ್ತು ಮೂರ್ತಿ ಕೆತ್ತನೆಯ ಕೆಲಸದಲ್ಲಿ ತೊಡಗಿಸಿಕೊಂಡವರು. ನಾಗಮೂರ್ತಿ ಸ್ವಾಮಿಯವರ ತಂದೆ ಸಂಸಾರಣಸ್ವಾಮಿ ಕೂಡಾ ಗ್ರಾಮದಲ್ಲಿ ಗಣೇಶ ಮೂರ್ತಿ ಸೇರಿದಂತೆ ಅನೇಕ ಮೂರ್ತಿಗಳನ್ನು ಸಿದ್ದಗೊಳಿಸುತ್ತಿದ್ದರು. ನಾಗಮೂರ್ತಿ ಸ್ವಾಮಿ ಕೂಡಾ ಚಿಕ್ಕ ವಯಸ್ಸಿನಿಂದಲೇ ಶಿಲ್ಪಕಲೆಯಲ್ಲಿ ಆಸಕ್ತಿ ಇತ್ತು. ಇವರು ಕಳೆದ ಹತ್ತು ವರ್ಷಗಳಿಂದ ವಾಸ್ತಶಿಲ್ಪಗಳು ಮತ್ತು ಮೂರ್ತಿಗಳ ಕೆತ್ತನೆಯ ಕೆಲಸವನ್ನು ಮಾಡುತ್ತಿದ್ದಾರೆ.