ಭಾರತೀನಗರ: ಇಲ್ಲಿಗೆ ಸಮೀಪದ ಚಿಕ್ಕರಸಿನಕೆರೆ ಗ್ರಾಮದಲ್ಲಿನ ಇತಿಹಾಸ ಪ್ರಸಿದ್ದ ಶ್ರೀಕಾಲಭೈರವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೆ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅವರು ಚಾಲನೆ ನೀಡಿದರು. ನಂತರ ಮಾತನಾಡಿ, ಸತ್ಯಧರ್ಮದಿಂದ ನಡೆದಾಗ ಮಾತ್ರ ನಾವು ಮುಕ್ತಿಕಾಣಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ದ್ವೇಷ-ಅಸೂಯೆಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಬೇಕು. ಇತಿಹಾಸ ಪ್ರಸಿದ್ಧವಾಗಿರುವ ಚಿಕ್ಕರಸಿನಕೆರೆ ಕಾಲಭೈರವೇಶ್ವರಸ್ವಾಮಿ ರಥೋತ್ಸವಕ್ಕೆ ವಿವಿಧ ಕಡೆಗಳಿಂದ ಭಕ್ತಾಧಿಗಳು ಆಗಮಿಸಿ ತಮ್ಮ ಕಷ್ಟಕಾರ್ಪಣ್ಯಗಳು ಈಡೇರಿಸಿಸುವಂತೆ ಪ್ರಾರ್ಥಿಸಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ನಾನು ಬಸಪ್ಪನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ರಥೋತ್ಸವಕ್ಕೂ ಮುನ್ನ ಕಾರ್ಕಹಳ್ಳಿ ಬಸವೇಶ್ವರ, ಬುಳ್ಳಕೆಂಪನದೊಡ್ಡಿ ನಿಶಾನಿ ಕಂಭ, ಮುಟ್ಟನಹಳ್ಳಿ ಏಳೂರಮ್ಮ, ಕಾಳಮ್ಮ, ಚಿಕ್ಕಸಿನಕೆರೆ ಹೊನ್ನಾರತಿ ಪೂಜೆಗಳು, ಛತ್ರಿ-ಚಾಮರಗಳು, ನಂದಿ ಕಂಭಗಳು ರಥದ ಬಳಿಗೆ ಆಗಮಿಸಿದವು. ತುಸು ಹೊತ್ತು ರಥದ ಮುಂಭಾಗ ದುಬ್ಬಾರೆ, ತಮಟೆ, ನಗಾರಿಗಳ ಸದ್ದಿಗೆ ಜನರು ಕುಣಿತ ಹಾಕಿದರು.
ಆ ನಂತರ ರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಇದಲ್ಲದೆ ಡೊಳ್ಳುಕುಣಿತ, ಪೂಜಾಕುಣಿತ, ದೊಣ್ಣೆವರಸೆ, ವೀರಗಾಸೆ, ಗಾರುಡಿಗೊಂಬೆಗಳ ಕುಣಿತವನ್ನೂ ಹಮ್ಮಿಕೊಳ್ಳಲಾಗಿತ್ತು. ರಥವನ್ನು ವಿವಿಧ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿತ್ತಲ್ಲದೆ ರಥದ ಮಧ್ಯ ಭಾಗದಲ್ಲಿ ಕಾಲಭೈರವೇಶ್ವರಸ್ವಾಮಿ ದೇವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿತ್ತು. ಈ ವಿಗ್ರಹ ಹಾಗೂ ರಥವನ್ನು ವಿವಿಧ ಪುಷ್ವಗಳಿಂದಲೂ ಅಲಂಕರಿಸಲಾಗಿತ್ತು.
ಈ ಸಂದರ್ಭದಲ್ಲಿ ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡು ರಥವನ್ನು ಎಳೆಯಲು ನಾಮುಂದು-ತಾಮುಂದು ಎಂದು ನಿಂತಿದ್ದರು. ಗ್ರಾಮದ ಮಹಿಳೆಯರು ರಸ್ತೆಯುದ್ದಕ್ಕೂ ರಥೋತ್ಸವಕ್ಕೆ ಪೂಜೆಸಲ್ಲಿಸಿದರು. ರಥೋತ್ಸವಕ್ಕೆ ಬಂದಂತಹ ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆಯನ್ನು ವಿತರಣೆ ಮಾಡಿದರು.
ರಥದಲ್ಲಿ ಇರಿಸಲಾದ ಶ್ರೀಕಾಲಭೈರವೇಶ್ವರ ಸ್ವಾಮಿ ವಿಗ್ರಹಕ್ಕೆ ಭಕ್ತಾಧಿಗಳು ಹಣ್ಣು-ಹವನಗಳನ್ನು ಎಸೆದು ಭಕ್ತಿಪೂರ್ವವಾಗಿ ನಮನ ಸಲ್ಲಿಸಿದರು. ನಂತರ ಬಂದಂತಹ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಥೋತ್ಸವದ ವೇಳೆ ಯಾವುದೇ ಅಹಿತರಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.