ಇತ್ತೀಚೆಗಿನ ದಿನಗಳಲ್ಲಿ ಮೂತ್ರಪಿಂಡದ ಕಾಯಿಲೆಗಳು ಮನುಷ್ಯನನ್ನು ಕಾಡುತ್ತಿದ್ದು ಅದನ್ನು ನಿಯಂತ್ರಿಸಿಕೊಂಡು ಬದುಕುವುದು ಒಂದು ಸವಾಲ್ ಆಗಿದೆ. ಹೀಗಿರುವಾಗ ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿರುವವರು ತಮ್ಮ ನಿತ್ಯದ ಬದುಕಿನಲ್ಲಿ ಆಹಾರಗಳ ಕ್ರಮಗಳ ಅನುಸರಿಸರಣೆ ಹೇಗಿರಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ವೈದ್ಯಕೀಯ ಉಪಚಾರದೊಂದಿಗೆ ತಾವು ಸೇವಿಸುವ ಆಹಾರದಲ್ಲಿ ಒಂದಷ್ಟು ಕಟ್ಟುನಿಟ್ಟು ಪಾಲಿಸಿಕೊಂಡು ವೈದ್ಯರು ಹೇಳುವ ಆಹಾರಕ್ರಮಗಳನ್ನು ಅಳವಡಿಸಿಕೊಂಡರೆ ಕಾಯಿಲೆಯ ನಿಯಂತ್ರಣ ಸಾಧ್ಯವಾಗಲಿದೆ.
ಸಾಮಾನ್ಯವಾಗಿ ವೈದ್ಯರು ಮೂತ್ರಾಂಗ ರೋಗಗಳಿಂದ ಬಳಲುವವರು ಪೊಟ್ಯಾಸಿಯಂಯುಕ್ತ ಆಹಾರವನ್ನು ಸೇವಿಸಬಾರದು ಎಂಬ ಸಲಹೆ ನೀಡುತ್ತಾರೆ. ಇದು ಹೇಗೆ ಸಾಧ್ಯವೆಂದರೆ ತರಕಾರಿ ಅಥವಾ ಬೇಳೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಿಕ ಆ ನೀರನ್ನು ಬಗ್ಗಿಸಿ ತೆಗೆದು ಮತ್ತೆ ಬೇಯಿಸಿ ಉಪಯೋಗಿಸುವುದರಿಂದ ಪೊಟ್ಯಾಸಿಯಂನ್ನು ಪ್ರತ್ಯೇಕಿಸಬಹುದಾಗಿದೆ.
ನಾವು ನಿತ್ಯ ಉಪಯೋಗಿಸುವ ಆಹಾರಗಳಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುವ ಪದಾರ್ಥಗಳ ದೊಡ್ಡ ಪಟ್ಟಿಯೇ ಇವೆ. ಅವುಗಳೆಂದರೆ ರಾಗಿ, ಗೋಧಿ, ಸಜ್ಜೆ ಹಿಟ್ಟು, ತರಕಾರಿಗಳಲ್ಲಿ ಬದನೆಕಾಯಿ, ನುಗ್ಗೆಕಾಯಿ, ಸುವರ್ಣಗೆಡ್ಡೆ, ಆಲೂಗೆಡ್ಡೆ, ಹಾಗಲಕಾಯಿ, ಹಣ್ಣುಗಳಲ್ಲಿ ನೆಲ್ಲಿಕಾಯಿ, ಸಪೋಟ, ಮೋಸಂಬಿ, ಕರಬೂಜ, ಪೀಚ್, ಪ್ಲಮ್, ಮಾವಿನ ಹಣ್ಣು ಮೊದಲಾದವುಗಳಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗಿಯೇ ಇದೆ. ಹೀಗಾಗಿ ಗೋಧಿಯನ್ನು ರೋಗಿಗಳು ವಾರಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿದರೆ ಉತ್ತಮ. ಇನ್ನು ಸಾಂಬಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅವುಗಳ ಬಳಕೆ ಕಡಿಮೆ ಮಾಡುವುದು ಅಗತ್ಯವಾಗಿದೆ.
ಸಜ್ಜೆ, ಜೋಳ, ರಾಗಿ ಸೇವಿಸಬಾರದು, ಕಾಳುಗಳು ಅಥವಾ ಮೊಳಕೆ ಕಾಳುಗಳ ಬಳಕೆಯನ್ನು ಸಂಪೂರ್ಣ ಕಡಿಮೆ ಮಾಡಬೇಕು, ಹಸಿ ಅಥವಾ ಒಣಗಿಸಿದ ಕೊಬ್ಬರಿ, ಎಳನೀರನ್ನು ದೂರವಿಡಬೇಕು. ಮಸಾಲೆ ಪದಾರ್ಥಗಳನ್ನು ಸೇವಿಸಬಾರದು. ಸೇಬು, ಅನಾನಸ್, ಪಪಾಯ, ಸೀಬೆ, ಕಿತ್ತಳೆ ಹಣ್ಣುಗಳ ಪೈಕಿ ದಿನಕ್ಕೆ ಯಾವುದಾದರು ಒಂದು ಹಣ್ಣನ್ನು ಸೇವಿಸಬಹುದು.
ಸಾಮಾನ್ಯವಾಗಿ ಮೂತ್ರಪಿಂಡ ಕಾಯಿಲೆಗಳಲ್ಲಿ ಹಲವು ವಿಧಗಳಿದ್ದು, ಕಾಯಿಲೆಯ ತೀವ್ರತೆ ಅಥವಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ದೇಹಸ್ಥಿತಿಯನ್ನು ಗಮನಿಸಿ ವೈದ್ಯರು ಯಾವ ರೀತಿಯ ಆಹಾರವನ್ನು ಸೇವಿಸಬೇಕು, ಹೇಗೆ ಸೇವಿಸಬೇಕು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಸಲಹೆಯನ್ನು ನೀಡುತ್ತಾರೆ ಅದರಂತೆ ರೋಗಿಗಳು ಕಟ್ಟು ನಿಟ್ಟಾಗಿ ಆಹಾರ ಕ್ರಮಗಳನ್ನು ಪಾಲಿಸಿದರೆ ತಮ್ಮನ್ನು ಬಾಧಿಸುತ್ತಿರುವ ಕಾಯಿಲೆಯನ್ನು ನಿಯಂತ್ರಣ ಮಾಡಿ ರಿಲ್ಯಾಕ್ಸ್ ಆಗಬಹುದು.
ಇವತ್ತು ಮೂತ್ರಾಂಗದ ಸಮಸ್ಯೆಯಿಂದ ಹಲವರು ಬಳಲುತ್ತಿದ್ದಾರೆ. ಇಂತಹವರು ವೈದ್ಯರು ನೀಡುವ ಸಲಹೆಯನ್ನು ಪಾಲಿಸಿಕೊಂಡು ಅದರಂತೆ ಆಹಾರಕ್ರಮಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾಗುತ್ತದೆ.