ನಮ್ಮ ದೇಶಕ್ಕೆ 1947 ರ ಆಗಸ್ಟ್ 15 ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಸಿಕ್ಕಿದ್ದು, ಈ ವರ್ಷ ನಾವು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಅಮೃತ ಮಹೋತ್ಸವದ ಹಿನ್ನೆಲೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ ( ಮನೆ ಮನೆಯಲ್ಲೂ ರಾಷ್ಟ್ರಧ್ವಜ) ಅಭಿಯಾನ ಮಾಡಲು ಸೂಚನೆ ನೀಡಿದ್ದರು. ಪ್ರತಿ ಮನೆಯಲ್ಲೂ ತಿರಂಗ ಹಾರಿಸುವ ಮೂಲಕ ಈ ಅಭಿಯಾನ ಯಶಸ್ವಿಯಾಯಿತು.
ಸ್ವಾತಂತ್ರ್ಯ ದಿನವು ಎಲ್ಲ ಭಾರತೀಯ ನಾಗರೀಕರಿಗೆ ಅತ್ಯಂತ ಮಹತ್ವದ ದಿನವಾಗಿದೆ. ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಹಲವು ವರ್ಷಗಳ ಕಠಿಣ ಹೋರಾಟದ ಫಲವೇ ಇದು. ಭಾರತದ ಸ್ವಾತಂತ್ರ್ಯದ ಮೊದಲ ದಿನವನ್ನು ನೆನಪಿಟ್ಟುಕೊಳ್ಳಲು ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಪಡೆಯುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರ ಎಲ್ಲ ತ್ಯಾಗಗಳನ್ನು ನೆನಪಿಸಿಕೊಳ್ಳಲು ಆಗಸ್ಟ್ 15 ರಂದು ಪ್ರತಿ ವರ್ಷ ಸ್ವಾತಂತ್ರ್ಯ ದಿನ ಆಚರಿಸುತ್ತೇವೆ.
ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿದ್ದಲ್ಲ. ಈ ಸ್ವಾತಂತ್ರ್ಯ ಸಿಕ್ಕಿರುವ ಹಿಂದೆ ಅದೆಷ್ಟೋ ಜನರ ತ್ಯಾಗ ಬಲಿದಾನ ಇದೆ. ಅವರ ತ್ಯಾಗ ಬಲಿದಾನದ ಫಲವಾಗಿ ನಾವಿಂದು ಸ್ವಾತಂತ್ರ್ಯರಾಗಿದ್ದೇವೆ. ನಮ್ಮ ಈ ಅದೃಷ್ಟಕ್ಕೆ ಕಾರಣರಾದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಅವರುಗಳಲ್ಲಿ ಮಹಾತ್ಮ ಗಾಂಧಿ, ಮಂಗಲಪಾಂಡೆ, ಭಗತ್ಸಿಂಗ್, ಸುಭಾಸ್ ಚಂದ್ರ ಬೋಸ್, ಚಂದ್ರ ಶೇಖರ್ ಆಜಾದ್ ಅವರ ತ್ಯಾಗವನ್ನು ನಾವು ಎಂದಿಗೂ ಮರೆಯ ಬಾರದು.
ಭಾರತ ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಹಲವು ಹೊಸತುಗಳನ್ನು ಕಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ. ಅದಕ್ಕೆ ಭಾರತ ದೇಶ ಸಾಕ್ಷಿಯಾಗಿದೆ.