ಈಗಾಗಲೇ ಕೇರಳದಲ್ಲಿ ಕಾಣಿಸಿಕೊಂಡು ಇಬ್ಬರ ಜೀವವನ್ನು ಬಲಿಪಡೆದುಕೊಂಡಿರುವ ನಿಫಾವೈರಸ್ ಈಗ ಎಲ್ಲರ ನಿದ್ದೆಗೆಡಿಸುವಂತೆ ಮಾಡಿದೆ. ಕೇರಳದಲ್ಲಿ ಕಾಣಿಸಿಕೊಂಡ ವೈರಸ್ ನಮ್ಮ ರಾಜ್ಯದತ್ತ ಕಾಲಿಡಲು ಹೆಚ್ಚು ಸಮಯ ಬೇಕಾಗಿಲ್ಲ. ಹೀಗಾಗಿ ಸರ್ಕಾರ ಗಡಿಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ ನಾವು ಈ ಸೋಂಕಿನತ್ತ ಹೆಚ್ಚಿನ ಕಾಳಜಿ ವಹಿಸಿ ಅದು ಬಾರದಂತೆ ತಡೆಯುವುದು ಅನಿವಾರ್ಯವಾಗಿದೆ.
ನಮ್ಮ ರಾಜ್ಯದಲ್ಲಿ ಈಗಾಗಲೇ ಡೆಂಗ್ಯೂ ಸುದ್ದಿ ಮಾಡುತ್ತಿದ್ದೆ. ಜತೆಗೆ ಸಾಂಕ್ರಾಮಿಕ ಜ್ವರವೂ ಕಾಡುತ್ತಿದೆ. ಹೀಗಿರುವಾಗ ಪಕ್ಕದ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿರುವುದು ಒಂದು ರೀತಿಯಲ್ಲಿ ಆತಂಕಕಾರಿಯಾಗಿದ್ದರೂ ನಾವು ಈ ಬಗ್ಗೆ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುವುದು ಬಹುಮುಖ್ಯವಾಗಿದೆ. ಅದರಲ್ಲೂ ನಾವು ಮುಂಜಾಗ್ರತಾ ಕ್ರಮಗಳ ಮೂಲಕ ಅದು ಬಾರದಂತೆ ನೋಡಿಕೊಳ್ಳಬೇಕಾಗಿದೆ.
ನಿಫಾ ಜ್ವರದಲ್ಲಿ ವೈರಸ್ ಗಳು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುತ್ತವೆ. ಆದ್ದರಿಂದಲೇ ಇದು ಭಯಾನಕವಾಗಿದೆ. ಇಂತಹದೊಂದು ಸೋಂಕು ಎಲ್ಲಿ ಪತ್ತೆಯಾಯಿತು? ಇದರ ಗುಣಲಕ್ಷಣಗಳೇನು ಎಂಬುದನ್ನು ನೋಡುತ್ತಾ ಹೋದರೆ ಇದು ಮೊದಲು ಕಾಣಿಸಿಕೊಂಡಿದ್ದು 1998ರಲ್ಲಿ ಮಲೇಷ್ಯಾದ ನಿಫಾದಲ್ಲಿ ಎಂಬುದು ತಿಳಿದು ಬರುತ್ತದೆ. ನಿಫಾ ಎಂಬ ಊರಲ್ಲಿ ಪತ್ತೆಯಾದ ಕಾರಣ ನಿಫಾ ಎಂದೇ ಕರೆಯಲಾಗುತ್ತಿದೆ. ಮುಂದೆ ಇದು 2011ರಲ್ಲಿ ಬಾಂಗ್ಲಾ ದೇಶದಲ್ಲೂ ತದ ನಂತರ ಮಲೇಷ್ಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾ ದೇಶಗಳಲ್ಲಿ ಕಾಣಿಸಿಕೊಂಡಿತು. ಇದೀಗ ಎರಡನೇ ಬಾರಿಗೆ ನೆರೆಯ ರಾಜ್ಯ ಕೇರಳದಲ್ಲಿ ಕಾಣಿಸಿಕೊಂಡಿದೆ.
ತಲೆನೋವು, ಮೈಕೈನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಜ್ಞಾಹೀನತೆ ನಿಫಾ ಜ್ವರದ ಲಕ್ಷಣಗಾಗಿವೆ. ಇದಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸುವುದು ಅನಿವಾರ್ಯವಾಗಿದೆ. ಸಾಕು ಪ್ರಾಣಿಗಳಾದ ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಟ್ಟು ಸೋಂಕು ಹರಡದಂತೆ ನೋಡಿಕೊಳ್ಳಬೇಕಾಗುತ್ತದೆ.
ಇನ್ನು ಸೋಂಕು ತಗುಲಿದ ಅಥವಾ ಶಂಕಿತ ಪ್ರಕರಣಗಳನ್ನು ಪ್ರತ್ಯೇಕವಾಗಿಡಬೇಕು. ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸಬೇಕು. ಹಸ್ತಲಾಘವ ಕೊಡವುದನ್ನು ತಪ್ಪಿಸಿ ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ತಪ್ಪದೇ ಬಳಸುವುದು, ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ, ಸುಲಿದು ಮತ್ತು ಬೇಯಿಸಿ ತಿನ್ನುವುದು, ಪ್ಲೂ ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರಾ ಕುಡಿಯಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳುವುದು ಒಳ್ಳೆಯದು. ರೋಗಿಯ ಶರೀರದ ಸ್ರಾವದೊಂದಿಗೆ (ಜೊಲ್ಲು, ಬೇವರು ಮಾತ್ರ) ಸಂಪರ್ಕ ತಪ್ಪಿಸಬೇಕು. ಯಾರಿಗಾದರೂ ಜ್ವರದ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳುವುದು ಬಹು ಮುಖ್ಯವಾಗಿದೆ.