ಮಂಗಳೂರು: ಮಧುಮೇಹ ಕಾಯಿಲೆಯು ಒಂದು ಜೀವನ ಶೈಲಿ ಹಾಗೂ ಆಹಾರ ಸೇವನೆ ಪದ್ಧತಿಯಿಂದ ಬರುವ ಕಾಯಿಲೆಯಾಗಿದ್ದು ಇದರ ಮಾಹಿತಿ ಮತ್ತು ಜಾಗೃತಿ ಇಲ್ಲದೆ ದೇಶದಲ್ಲಿ ಪ್ರತಿವರ್ಷ ಹೆಚ್ಚಿನ ಜನರು ಕಾಯಿಲೆಗೆ ತುತ್ತಾಗುತ್ತಿದ್ದು ಮತ್ತು ದೇಶವು ಮಧುಮೇಹ ಖಾಯಿಲೆಯ ರಾಜಧಾನಿಯಾಗುವ ಪರಿಸ್ಥಿತಿಯಲ್ಲಿದೆ ಎಂದು ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಪಕಿಯಾದ ಡಾ| ಅಖಿಲಾ ಭಂಡಾರ್ಕರ್ ಮಾಹಿತಿ ನೀಡಿದ್ದಾರೆ.
ಅವರು ತಾ.೨೨.೦೩.೨೦೨೩ ರಂದು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ತಮ್ಮ ಸದಸ್ಯರ ಆರೋಗ್ಯ ಮತ್ತು ಆರೈಕೆ ಅಭಿಯಾನದ ಅಂಗವಾಗಿ ಆಯೋಜಿಸಿದ ವೈದ್ಯಕೀಯ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಧುಮೇಹ ಕಾಯಿಲೆಯ ಮೂಲ ಕಾರಣಗಳು, ಲಕ್ಷಣಗಳು, ನಿವಾರಣಾ ಉಪಾಯಗಳು ಹಾಗು ಚಿಕಿತ್ಸಾ ಕ್ರಮಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಿದ್ದಾರೆ.
ಪ್ರಥಮ ಹಂತದಲ್ಲಿ ಚಿಕಿತ್ಸೆ ಮಾಡಿದರೆ ಜೀವ ಅಪಾಯದಿಂದ ದೂರವಿರಬಹುದು, ನಿರ್ಲಕ್ಷಿಸಿದ್ದರೆ ಇತರ ಅಂಗಾಗಗಳಾದ ಕಣ್ಣು, ಹೃದಯ, ಕಾಲು ಹಾಗು ಕಿಡ್ನಿ ವೈಫಲ್ಯ ಸಂಭವಿಸಬಹುದು ಎಂದು ಸೂಚನೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ರೋ| ಬಸವಕುಮಾರ್ ಸ್ವಾಗತಿಸಿ ಮುಖ್ಯ ಅತಿಥಿಯ ಪರಿಚಯ ಮತ್ತು ಸಾಧನೆಗಳ ವಿವರ ನೀಡಿದರು. ಕಾರ್ಯದರ್ಶಿ ಪ್ರಶಾಂತ್ ರೈ ವರದಿ ಮಂಡಿಸಿದರು. ಸಂಸ್ಥೆಯ ಸ್ಥಾಪನಾಧ್ಯಕ್ಷ ಡಾ| ರಂಜನ್ ವಂದಿಸಿದರು.