ಬೀದರ್: ‘ನಗರದ ಭಾರತೀಯ ಕುಟುಂಬ ಯೋಜನಾ ಸಂಘ (ಎಫ್ಪಿಎಐ) ಬೀದರ್ ಶಾಖೆಯಿಂದ ಸ್ತನ ಮತ್ತು ಗರ್ಭಕಂಠ ಕೊರಳಿನ ಕ್ಯಾನ್ಸರ್ಗೆ ಉಚಿತ ಪರೀಕ್ಷೆ ಮಾಡಲಾಗುತ್ತಿದ್ದು, ಜನರು ಇದರ ಪ್ರಯೋಜನ ಪಡೆಯಬೇಕು’ ಎಂದು ಸಂಘದ ಬೀದರ್ ಶಾಖೆ ಅಧ್ಯಕ್ಷ ಡಾ. ನಾಗೇಶ ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಗರ್ಭಕಂಠ ಕೊರಳಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ. ಜಗತ್ತಿನಲ್ಲಿ ಪ್ರತಿವರ್ಷ 3 ಲಕ್ಷ ಮಹಿಳೆಯರು ಇದರಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ಎರಡು ನಿಮಿಷಕ್ಕೆ ಒಬ್ಬ ಮಹಿಳೆ ನಿಧನ ಹೊಂದುತ್ತಿದ್ದಾಳೆ. ಭಾರತದಲ್ಲಿ 2023ನೇ ಸಾಲಿನಲ್ಲಿ 77 ಸಾವಿರ ಮಹಿಳೆಯರು ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ. ರೋಗ ಬಂದ ನಂತರ ಎಚ್ಚೆತ್ತುಕೊಳ್ಳುವುದರ ಬದಲು ಅದಕ್ಕೂ ಮುನ್ನ ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.
ಎಫ್ಪಿಎಐ ಬೀದರ್ ಶಾಖೆಯಲ್ಲಿ ಅತ್ಯಾಧುನಿಕ ‘ಕಾಲ್ಪೋಸ್ಕೋಪಿ’, ‘ಪ್ಯಾಪ್ಸ್ಮೀಯರ್’, ‘ಹ್ಯುಮನ್ ಪಾಪಿಲೋಮ ವೈರಸ್’ (ಎಚ್ಪಿವಿ) ಪರೀಕ್ಷೆ ನಡೆಸಿ ಕ್ಯಾನ್ಸರ್ ಪತ್ತೆ ಹಚ್ಚುವ ಸೌಲಭ್ಯವಿದೆ. ಬೀದರ್ ಜಿಲ್ಲೆಯಲ್ಲಿ 721 ಮಹಿಳೆಯರ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಧಾರವಾಡ ಜಿಲ್ಲೆ ನಂತರ ಅತಿ ಹೆಚ್ಚು ಪರೀಕ್ಷೆ ನಡೆಸಿದ್ದು ಬೀದರ್ ಜಿಲ್ಲೆಯಲ್ಲಿ ಎಂದು ತಿಳಿಸಿದರು.
ಎಫ್ಪಿಎಐ ಉಪಾಧ್ಯಕ್ಷೆ ಡಾ.ಸವಿತಾ ಚಾಕೋತೆ, ಡಾ. ಲಲಿತಮ್ಮ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ತಾಯಿ ಕಾರ್ಡ್ನಲ್ಲಿ ಗರ್ಭಕಂಠ ಕೊರಳಿನ ಕ್ಯಾನ್ಸರ್ಗೆ ಕೊಡಲಾಗುವ ಲಸಿಕೆಯನ್ನು ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ. ಖಾಸಗಿಗೆ ಹೋಲಿಸಿದರೆ ಎಫ್ಪಿಎಐನಿಂದ ಅತಿ ಕಡಿಮೆ ಬೆಲೆಗೆ ಲಸಿಕೆ ನೀಡಲಾಗುತ್ತಿದೆ ಎಂದರು.
ಶಾಲಾ, ಕಾಲೇಜು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಗ್ಗೆ ಹೆಚ್ಚಿನ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಮಹಿಳಾ ಪೊಲೀಸರು, ಆಶಾ ಕಾರ್ಯಕರ್ತೆಯರಿಗೆ ಕಾರ್ಯಾಗಾರ ಏರ್ಪಡಿಸಿ ತಿಳಿವಳಿಕೆ ಮೂಡಿಸಲಾಗಿದೆ ಎಂದು ಹೇಳಿದರು.
ಸುಬ್ರಹ್ಮಣ್ಯ ಪ್ರಭು ಮಾತನಾಡಿ, ಪ್ರತಿ ವರ್ಷ ಕನಿಷ್ಠ ಎರಡು ಸಾವಿರ ಮಹಿಳೆಯರನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಆಶಾ, ಅಂಗನವಾಡಿ ಕಾರ್ಯಕರ್ತರ ನೆರವು ಪಡೆಯಲಾಗುವುದು. ಅವರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ವಿನಾಯಕ ಕುಲಕರ್ಣಿ, ವಿಜಯಲಕ್ಷ್ಮಿ ಹುಡಗೆ ಹಾಜರಿದ್ದರು ಡಾ. ಆರತಿ ರಘು ಮಾತನಾಡಿದರು. ಯಾರಿಗೆಲ್ಲ ಅಪಾಯ? ಕ್ಯಾನ್ಸರ್ ಬರದಿರಲು ಏನು ಮಾಡಬೇಕು? (ಚಿತ್ರ ಇದೆ) ಡಾ. ರತಿ ರಘು ಮಾತನಾಡಿ ಮಹಿಳೆಯರ ಗರ್ಭಕೋಶದ ಕೊರಳಿನಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಿಂದ ಗರ್ಭಕಂಠದ ಕೊರಳಿನ ಕ್ಯಾನ್ಸರ್ ಬರುತ್ತದೆ. ಹೆಚ್ಚು ಜನರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ‘ಎಚ್ಪಿವಿ’ ಸೋಂಕು ಹರಡುತ್ತದೆ. ಆದರೆ ಎಲ್ಲಾ ‘ಎಚ್ಪಿವಿ’ ಕ್ಯಾನ್ಸರ್ಕಾರಕ ಆಗಿರುವುದಿಲ್ಲ. ‘ಹೈರಿಸ್ಕ್’ ಸೋಂಕಿನಿಂದ ಕ್ಯಾನ್ಸರ್ ಬರುತ್ತದೆ ಎಂದು ವಿವರಿಸಿದರು. ಗರ್ಭಕಂಠ ಕೊರಳಿನ ಕ್ಯಾನ್ಸರ್ ಮೊದಲ ಹಂತದಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಆದರೆ ನಂತರದ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ವಾಸನೆಯುಕ್ತ ಬಿಳಿಮುಟ್ಟು ಸಂಭೋಗದ ನಂತರ ರಕ್ತಸ್ರಾವ ಅನಿಯಮಿತ ರಕ್ತಸ್ರಾವ ರಕ್ತಸ್ರಾವಯುಕ್ತ ಬಿಳಿಮುಟ್ಟಿನ ಲಕ್ಷಣಗಳು ಕಂಡು ಬಂದರೆ ತಡೆಮಾಡದೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಅಸುರಕ್ಷಿತ ಲೈಂಗಿಕ ಮತ್ತು ಒಬ್ಬರಿಗಿಂತ ಹೆಚ್ಚಿನ ಲೈಂಗಿಕ ಸಂಗಾತಿಗಳಿದ್ದರೆ ಹೆಚ್ಚು ಮಕ್ಕಳನ್ನು ಹೆತ್ತವರು ಎಚ್ಐವಿ ಸೋಂಕಿತರು ಅತಿಯಾದ ಧೂಮಪಾನ ಮದ್ಯಪಾನ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಹಿಳೆಯರಲ್ಲಿ ಗರ್ಭಕಂಠ ಕೊರಳಿನ
ಕ್ಯಾನ್ಸರ್ಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು. 9ರಿಂದ 16 ವರ್ಷದೊಳಗಿನವರು ಆರು ತಿಂಗಳ ಅಂತರದೊಳಗೆ ಎರಡು ಡೋಸ್ 16ರಿಂದ 26 ವರ್ಷ ವಯಸ್ಸಿನವರು ಮೂರು ಡೋಸ್ ಲಸಿಕೆ ಪಡೆಯಬೇಕು. ಕಾಲಕಾಲಕ್ಕೆ ಪರೀಕ್ಷೆಗೆ ಒಳಪಟ್ಟರೆ ಕ್ಯಾನ್ಸರ್ನಿಂದ ದೂರ ಇರಬಹುದು ಎಂದು ಸಲಹೆ ಮಾಡಿದರು.
– ಸುವರ್ಣ ಮಹೋತ್ಸವ ಸಂಭ್ರಮ ಇಡೀ ಭಾರತದಲ್ಲಿ ಎಫ್ಪಿಎಐ 41 ಶಾಖೆಗಳನ್ನು ಹೊಂದಿದೆ. 1971ರಲ್ಲಿ ಬೀದರ್ ಜಿಲ್ಲೆಯಲ್ಲಿ ಆರಂಭಗೊಂಡಿರುವ ಶಾಖೆ ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಶೀಘ್ರದಲ್ಲೇ 50ರ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಎಫ್ಪಿಎಐ ಬೀದರ್ ಶಾಖೆ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ತಿಳಿಸಿದರು. ತಾಯಿ ಮಗುವಿನ ಆರೋಗ್ಯ ಸಂತಾನೋತ್ಪತ್ತಿ ಕುಟುಂಬ ಯೋಜನೆ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳ ಕುರಿತು ಬೀದಿ ನಾಟಕ ಮೂಕ ಅಭಿನಯ ಸೇರಿದಂತೆ ಇತರೆ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.