ಚಿಕ್ಕಮಗಳೂರು: ಕೀಲು ನೋವು ಮತ್ತು ಅಸ್ತಮ ರೋಗ ನಿಯಂತ್ರಣಕ್ಕೆ ಆಯುರ್ವೇದಿಕ್ ಔಷಧಿ ಹೆಚ್ಚು ಪರಿಣಾಮಕಾರಿ ಎಂದು ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವೆಂಕಟೇಶ್ ಹೇಳಿದ್ದಾರೆ.
ಚಿಕ್ಕಮಗಳೂರು ಲಯನ್ಸ್ ಕ್ಲಬ್ ಸ್ಪರ್ಶ ಆಯುರ್ವೇದಿಕ್ ಆಸ್ಪತ್ರೆ ಹಾಗೂ ರಾಜಸ್ಥಾನದ ಆಯುರ್ವೇದಿಕ್ ಔಷಧಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನಗರದ ರತ್ನಗಿರಿ ರಸ್ತೆಯಲ್ಲಿರುವ ಸ್ಪರ್ಶ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಇಂದು ನಡೆದ ಆರೋಗ್ಯ ಅರಿವು ಮತ್ತು ಉಚಿತ ಅಸ್ತಮಾ ಚಿಕಿತ್ಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವಿಶ್ವಾದ್ಯಾಂತ ಅಸ್ತಿತ್ವದಲ್ಲಿರುವ ಲಯನ್ಸ್ ಸೇವಾ ಸಂಸ್ಥೆ ಹಲವು ದಶಕಗಳಿಂದ ಆರೋಗ್ಯ ಅರಿವು ಮತ್ತು ಆರೋಗ್ಯ ತಪಾಸಣಾ ಶಿಬಿರಗಳಿಗೆ ಹೆಚ್ಚು ಮಾನ್ಯತೆ ನೀಡುತ್ತಾ ಬಂದಿದ್ದು, ಈವರೆಗೆ ಲಕ್ಷಾಂತರ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆ ಸಹಕಾರ ನೀಡಿದೆ ಎಂದು ರಾಜಸ್ಥಾನದಿಂದ ಬಂದಿರುವ ಆಯುರ್ವೇದಿಕ್ ಔಷಧಿ ಕೇಂದ್ರ ಹಾಗೂ ಸ್ಪರ್ಶ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಲಯನ್ಸ್ ಸಂಸ್ಥೆಯ ಸಹಕಾರದೊಂದಿಗೆ ಇಂದು ನಡೆಯುತ್ತಿರುವ ಕೀಲು ನೋವು ಮತ್ತು ಅಸ್ತಮಾ ರೋಗಿಗಳಿಗೆ ಆರೋಗ್ಯ ತಪಾಸಣೆ ಮೂಲಕ ಉಚಿತ ಔಷಧಿಯನ್ನು ನೀಡುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಪ್ರಯೋಜನ ಪಡೆದಲ್ಲಿ ಈ ಆರೋಗ್ಯ ತಪಾಸಣಾ ಶಿಬಿರ ಸಾರ್ಥಕತೆ ಪಡೆಯಲಿದೆ ಎಂದು ತಿಳಿಸಿದರು.
ಆರೋಗ್ಯ ಸೇವಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತಿರುವ ಲಯನ್ಸ್ ಸೇವಾ ಸಂಸ್ಥೆ ಬಡ ರೋಗಿಗಳಿಗೆ ಇಂತಹ ಶಿಬಿರಗಳನ್ನು ಹಮ್ಮಿಕೊಂಡು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ಕೆಲಸ ಮಾಡುತ್ತಿದೆ. ರಾಜಸ್ಥಾನದ ಆಯುರ್ವೇದಿಕ್ ಸಂಸ್ಥೆ ಕೀಲುನೋವು ಮತ್ತು ಅಸ್ತಮಾ ರೋಗಿಗಳಿಗೆ ತಪಾಸಣೆ ನಡೆಸಿ ಉಚಿತ ಔಷಧಿ ನೀಡುತ್ತಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.