ಮಳೆಗಾಲ ಬಂತೆಂದರೆ ಎಲ್ಲರಿಗೂ ಸಂತೋಷ, ತುಂತುರು ಮಳೆ ಜೊತೆ ಬಿಸಿ ಬಿಸಿಯಾಗಿ ಆಹಾರ ಸವಿದರೆ ಅದರ ಮಜಾವೇ ಬೇರೆ. ಆದರೆ ಈ ಸಮಯದಲ್ಲಿ ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯವನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳುತ್ತವೆ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ.
ಎಲ್ಲ ಸಮಯಗಳಿಗಿಂತಲೂ ಮಳೆಗಾಲದಲ್ಲಿ ಜೀರ್ಣ ಕ್ರಿಯೆಯ ಸಾಮರ್ಥ್ಯ ಬಹಳ ಕಡಿಮೆಯಾಗಿರುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರಗಳು ನಮ್ಮ ದೇಹಕ್ಕೆ ಶಕ್ತಿಯ ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಸಾಹಯಕವಾಗುವಂತಿರಬೇಕು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.
ಮಳೆಗಾಲದಲ್ಲಿ ನಮ್ಮ ಜೀರ್ಣ ಕ್ರಿಯೆಗೆ ಸುಲಭವಾಗುವ ತರಕಾರಿಗಳಾದ, ಹೀರೆಕಾಯಿ, ಸೌತೆಕಾಯಿ, ಕುಂಬಳಕಾಯಿ ಮುಂತಾದ ತರಕಾರಿಗಳನ್ನು ಬಳಸುವುದು ಬಹಳ ಉತ್ತಮ. ತರಕಾರಿಗಳ ಜೊತೆಗೆ ಆರೋಗ್ಯಕರವಾದ ಸೂಪ್ಗಳನ್ನು ನಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು.
ಮಳೆಗಾಲದಲ್ಲಿ ಹೆಚ್ಚಾಗಿ ಕರಿದ ಪದಾರ್ಥಗಳಾದ ಬಜ್ಜಿ, ಬೋಂಡಗಳನ್ನು ತಿನ್ನದಿರುವುದು ಬಹಳ ಉತ್ತಮ. ಇಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಎದೆ ಉರಿ, ಹುಳಿತೇಗು, ಹೊಟ್ಟೆಉರಿ, ಹೊಟ್ಟೆ ಉಬ್ಬರಿಸುವುದು ಮುಂತಾದ ಸಮಸ್ಯೆಗಳು ಜಾಸ್ತಿಯಾಗುವ ಸಾಧ್ಯತೆಗಳಿರುತ್ತವೆ. ಹಾಗೂ ವಾತವನ್ನು ಜಾಸ್ತಿ ಮಾಡುವಂತಹ ಆಹಾರಗಳನ್ನು ಮಳೆಗಾಲದಲ್ಲಿ ಬಳಸದಿರುವುದು ಉತ್ತಮ.
ಮಳೆಗಾಲದಲ್ಲಿ ಬಾಯಾರಿಕೆಯಾಗುವುದು ಕಡಿಮೆ. ಆದರೆ ಕುಡಿಯುವ ನೀರಿನಲ್ಲಿ ಜೀರಿಗೆ ಹಾಕಿದ ನೀರನ್ನು ಕುಡಿಯುವುದು ದೇಹಕ್ಕೆ ಒಳ್ಳೆಯದು. ಆದಷ್ಟು ಮನೆಯಲ್ಲಿಯೇ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಸಾಧ್ಯವಾದಷ್ಟು ಹೊರಗಡೆ ತಿನ್ನುವ ಆಹಾರಗಳನ್ನು ಕಡಿಮೆಗೊಳಿಸಿದರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.
ವಾತದ ಸಮಸ್ಯೆಗಳು ಮಳೆಗಾಲದಲ್ಲಿ ನಮ್ಮ ದೇಹಕ್ಕೆ ಹೆಚ್ಚಾಗಿ ಅನುಭವಕ್ಕೆ ಬರುತ್ತದೆ. ಅಂತಹ ಸಮಯದಲ್ಲಿ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವ ಅಭ್ಯಾಸ ಬೆಳಿಸಿಕೊಳ್ಳುವುದು ಒಳ್ಳೆಯದು.