ಪ್ರಕೃತಿ ನಮಗೆ ವರದಾನವಾಗಿದೆ. ಇಲ್ಲಿರುವ ಪ್ರಾಣಿ, ಪಕ್ಷಿ ಮರಗಿಡಗಳೆಲ್ಲವೂ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಉಪಕಾರಿಗಳೇ.. ಹೀಗಿರುವಾಗ ಚಿಂತನಾಶೀಲ ಶಕ್ತಿಯಿರುವ ಮನುಷ್ಯರಾದ ನಾವೇಕೆ ಬರೀ ಸ್ವಾರ್ಥವನ್ನೇ ತುಂಬಿಕೊಂಡು ನಾನು, ನನ್ನದು ಎಂಬುದರಲ್ಲೇ ಬದುಕನ್ನು ಕಳೆಯುತ್ತೇವೆ. ನಮ್ಮಲ್ಲೇಕೆ ಪರೋಪಕಾರದ ಗುಣಗಳು ಬರುತ್ತಿಲ್ಲ?.
ನಿಜವಾಗಿ ಹೇಳಬೇಕೆಂದರೆ ನಮ್ಮ ಆರೋಗ್ಯ ಕೇವಲ ದೇಹಕ್ಕೆ ಸಂಬಂಧಿಸಿದಲ್ಲ. ಅದು ಮಾನಸಿಕವಾಗಿಯೂ ಇರಬೇಕು. ಆಗ ಮಾತ್ರ ದೇಹ ಲವಲವಿಕೆಯಿಂದ ಕೂಡಿರಲು ಸಾಧ್ಯ. ಕೆಲವೊಮ್ಮೆ ನಾವು ಮಾಡುವ ಚಿಕ್ಕ ಚಿಕ್ಕ ಸಹಾಯಗಳು ನಮ್ಮನ್ನು ತುಂಬ ಖುಷಿಯಾಗಿರುವಂತೆ ನೋಡಿಕೊಳ್ಳುತ್ತವೆ. ಆದರೆ ನಾವು ಇವತ್ತು ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತಿದ್ದೇವೆ.
ಏಕೆಂದರೆ ಇದ್ದುದರಲ್ಲಿ ನೆಮ್ಮದಿ ಕಾಣುವ ಜಾಯಮಾನ ನಮ್ಮದಲ್ಲ. ಏನು ಸಿಕ್ಕರೂ ಅದರಲ್ಲಿ ತೃಪ್ತಿ ಹೊಂದುತ್ತಿಲ್ಲ. ಇನ್ನು ಬೇಕೆಂಬ ದುರಾಸೆ ಮತ್ತು ನಾನು, ನನ್ನದು ಎಂಬ ಅಹಂ, ಮೊದಲಾವುಗಳು ಸೇರಿ ನಮ್ಮಲ್ಲಿರುವ ಪರೋಪಕಾರದ ಗುಣಗಳನ್ನು ನಾಶ ಮಾಡುತ್ತಿವೆ.
ಹಾಗೆ ನೋಡಿದರೆ ನಿಸರ್ಗ ಸೃಷ್ಠಿಯಲ್ಲಿರುವ ಪ್ರಾಣಿ, ಪಕ್ಷಿ, ಮರಗಿಡಗಳು ಮಾನವನಿಗೆ ಹಲವು ರೀತಿಯಲ್ಲಿ ಉಪಯೋಗಿಗಳಾಗಿವೆ. ಮರ, ನೆರಳು, ಹಣ್ಣು ನೀಡುತ್ತದೆ. ಇನ್ನು ನದಿಗಳ ಉಪಯೋಗ ಒಂದೆರಡಲ್ಲ. ಬೆಟ್ಟಗಳು ಬೀಸುವ ಮಾರುತಗಳನ್ನು ತಡೆದು ಮಳೆ ಸುರಿಸುತ್ತವೆ.
ಈ ಭೂಮಿ ಮೇಲೆ ಸೃಷ್ಠಿಯಾಗಿರುವ ಸಕಲ ಜೀವ ರಾಶಿಯೂ ಒಂದೊಂದು ರೀತಿಯಲ್ಲಿ ಉಪಯೋಗಿಯಾಗಿರುವಾಗ ನಾವು ಮಾತ್ರ ಕೇವಲ ನಮಗಾಗಿ ಬದುಕುತ್ತೇವೆ. ಮಾಡಿದ ಸಂಪಾದನೆಯಲ್ಲಿ ನಾಳೆಗೆ, ಮಕ್ಕಳಿಗೆ ಎಂದು ಕೂಡಿಡುತ್ತೇವೆ. ಮನೆ, ಆಸ್ತಿ, ಕಾರು ಹೀಗೆ ಒಂದು ಆದ ಮೇಲೊಂದು ಪಡೆಯುತ್ತಲೇ ಹೋಗುತ್ತೇವೆ. ಇದರ ನಡುವೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಯೋಚಿಸುವುದೇ ಇಲ್ಲ.
ನಮ್ಮ ಸಂಪಾದನೆಯಲ್ಲಿ ಒಂದಷ್ಟು ಬಡ ಜನತೆಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಹೆಚ್ಚಿನವರಿಗಿಲ್ಲ. ಕೆಲವರಿದ್ದಾರೆ ದಾನ, ಧರ್ಮ ಮಾಡುತ್ತಾರಾದರೂ ಅದನ್ನು ಎಲ್ಲರ ಎದುರು ಗುರುತಿಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಾರೆ