ಸೆಪ್ಟಂಬರ್ 10ನ್ನು ವಿಶ್ವ ಆತ್ಮಹತ್ಯೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಕೂಡ ದಿನದಿಂದ ಹೆಚ್ಚಾಗುತ್ತಿದೆ. ಸಮಸ್ಯೆಯನ್ನು ಎದುರಿಸಿ ಬದುಕುವ ಧೈರ್ಯ ಸಾಲದೆ ಚಿಕ್ಕ ಚಿಕ್ಕ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ನಿರ್ಧಾರಕ್ಕೆ ಬರುತ್ತಿರುವುದು ಕಂಡು ಬರುತ್ತಿರುವುದು.
ಇತ್ತೀಚೆಗಿನ ವರ್ಷಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದೆ. ಸಾಮಾನ್ಯವಾಗಿ ರೈತರು ಕೃಷಿಯಲ್ಲಿ ನಷ್ಟಹೊಂದಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಪ್ರಕರಣ ಕೇಳಿ ಬರುತ್ತಿದ್ದವು. ಆದರೆ ಇದೀಗ ಅಧಿಕಾರಿಗಳು, ಯುವಕರು, ಯುವತಿಯರು ಹೀಗೆ ಉದ್ಯೋಗಸ್ಥರು ಕೂಡ ಆತ್ಮಹತ್ಯೆಗೆ ಶರಣಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಆತ್ಮಹತ್ಯೆಗಳಿಗೆ ಕಾರಣಗಳು ಬಹಳಷ್ಟಿರಬಹುದು. ಆತ್ಮಹತ್ಯೆ ಕಡೆಗೆ ಹೋದ ಮನಸ್ಸು ಮರಳಿ ಬಂದು ಬಿಟ್ಟರೆ ಆ ತಕ್ಷಣಕ್ಕೆ ಆತ ಬಚಾವಾಗಿಬಿಟ್ಟರೆ ಮತ್ತೆ ಆತ್ಮಹತ್ಯೆ ಮಾಡಿಕೊಳ್ಳಲಾರ. ಕೆಲವೊಮ್ಮೆ ಇನ್ನು ನಾನು ಬದುಕಿ ಪರಯೋಜನವಿಲ್ಲ ಎಂಬ ಮನಸ್ಥಿತಿಯವರು ಕೂಡ ದಿಢೀರ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದು ಬಿಡಬಹುದು.
ಹಾಗೆ ನೋಡಿದರೆ ನಮ್ಮನ್ನು ಕಾಡುವ ಬಹಳಷ್ಟು ಕಾಯಿಲೆಗಳು ಹೊರಗಿನವರಿಗೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ ಔಷಧಿಯೂ ಇದೆ. ಆದರೆ ಬೇರೆಯವರಿಗೆ ಗೊತ್ತೇ ಆಗದೆ ತಮ್ಮಲ್ಲೇ ನೊಂದು, ಬೆಂದು, ಖಿನ್ನತೆಗೊಳಗಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಆತ್ಮಹತ್ಯೆ ಕೂಡ ರೋಗದಂತೆ ಭಾಸವಾಗ ತೊಡಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟಗಳು ಕಾರಣವಾಗಿದ್ದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಬೇರೆ, ಬೇರೆ ಕಾರಣಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬಹುದು. ಎಲ್ಲ ವಯೋಮಾನದವರು ಆತ್ಮಹತ್ಯೆ ಮಾಡಿಕೊಂಡರೂ ಹೆಚ್ಚಾಗಿ 15ರಿಂದ29ರ ವಯೋಮಾನವರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ಆತ್ಮಹತ್ಯೆಯ ಪ್ರಮುಖ ಚಿಹ್ನೆಗಳೆಂದರೆ ಸಾಯುವ ಬಗೆಗಿನ ಮಾತು, ಓದು, ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವುದು, ಮಾನಸಿಕ ಕಾಯಿಲೆಗಳು, ಕುಡಿತದ ವ್ಯಸನ, ಈ ಮೊದಲೇ ಆತ್ಮಹತ್ಯೆ ಪ್ರಯತ್ನ, ಕುಟುಂಬದಲ್ಲಿ ಆತ್ಮಹತ್ಯೆ ಪ್ರಕರಣ ನಡೆದಿದ್ದರೆ, ಹತಾಶೆ ಭಾವನೆ ಭವಿಷ್ಯದ ಬಗ್ಗೆ, ನಿರಾಶೆ ಅಸಹನೀಯ ಭಾವನೆ, ಮನಸ್ಸಿನ ಹೊಯ್ದಾಟ, ಹಠಾತ್ ಬದಲಾವಣೆ, ಬಂಡಾಯದ ವ್ಯಕ್ತಿತ್ವ, ನಿರಾಸಕ್ತಿ, ತನ್ನ ಬಗ್ಗೆಯೇ ನಿರ್ಲಕ್ಷ್ಯತನ, ಆಹಾರ, ನಿದ್ರೆಯಲ್ಲಿ ಬದಲಾವಣೆ ಇತ್ಯಾದಿಗಳಾಗಿವೆ.
ವ್ಯಕ್ತಿಯೊಬ್ಬ ಆತ್ಮಹತ್ಯೆ ಕಡೆಗೆ ವಾಲುತ್ತಿದ್ದಾನೆ ಎಂಬ ಸುಳಿವು ಸಿಕ್ಕರೂ ಆ ವ್ಯಕ್ತಿಯನ್ನು ಮಾನಸಿಕ ತಜ್ಞರ ಬಳಿಗೆ ಕರೆದೊಯ್ದು ಸಮಾಲೋಚನೆ ನಡೆಸುವುದು, ಮನವೊಲಿಸುವುದು, ಔಷಧೋಪಚಾರ ಬಗ್ಗೆ ಮಾಹಿತಿ ನೀಡಿ ಬದುಕಿನ ಬಗ್ಗೆ ಆಸಕ್ತಿ ಮೂಡಿಸುವುದು, ಅಡ್ಡ ಪರಿಣಾಮಗಳ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡಬಹುದು.
ಆದರೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ದೃಢ ನಿರ್ಧಾರ ಮಾಡಿದ್ದಲ್ಲಿ ಆ ವ್ಯಕ್ತಿಗೆ ಸಹಾಯದ ಬಗ್ಗೆ ನಂಬಿಕೆ ಇರುವುದಿಲ್ಲ. ಸಹಾಯವನ್ನೂ ನಿರೀಕ್ಷಿಸುವುದಿಲ್ಲ. ಹೀಗಾಗಿ ಆತನ ನಡೆ ಗಮನಿಸಿ ಸಹಾಯ ನೀಡಬೇಕಾಗುತ್ತದೆ. ಸರಕಾರಾತ್ಮಕ ಜೀವನ ಪದ್ಧತಿಗೆ ಪ್ರೋತ್ಸಾಹಿಸಿ, ನಿದ್ರೆ ನಡಿಗೆ, ವ್ಯಾಯಾಮದತ್ತ ಸೆಳೆಯಬೇಕು. ಇನ್ನು ಸುರಕ್ಷತಾಕ್ರಮಗಳಾಗಿ ಮನೆಯಲ್ಲಿ ಮಾತ್ರೆ, ಹರಿತ ಆಯುಧ, ಕೀಟನಾಶಕ, ಹಗ್ಗ ಇನ್ನಿತರ ವಸ್ತುಗಳು ಸುಲಭವಾಗಿ ಕೈಗೆ ಸಿಗದಂತೆ ನೋಡಿಕೊಳ್ಳಬೇಕು. ಒಂಟಿಯಾಗಿರಲು ಬಿಡದೆ ಜನರೊಂದಿಗೆ ಸೇರುವ ಅವಕಾಶ ಮಾಡಿಕೊಡಬೇಕು. ಇದರಿಂದ ಅವರ ಮನಸ್ಸನ್ನು ಬೇರೆಡೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ.
ಮುಖ್ಯವಾಗಿ ಖಿನ್ನತೆ, ಮಾದಕ ವ್ಯಸನ, ಸ್ಕಿಜೋಫ್ರೆನಿಯ, ವ್ಯಕ್ತಿತ್ವ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಆತ್ಮಹತ್ಯೆಯತ್ತ ಯೋಚಿಸುತ್ತಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.90ರಷ್ಟು ಮಾನಸಿಕ ಕಾಯಿಲೆಗಳಿಂದ ಬಳಲುವವರೇ ಆಗಿದ್ದಾರೆ.
ಆತ್ಮಹತ್ಯೆಗೆ ಶರಣಾದವರಲ್ಲಿ ಶೇ.20ರಷ್ಟು ಈ ಮೊದಲೇ ಪ್ರಯತ್ನ ಮಾಡಿರುತ್ತಾರೆ. ಇಂತಹವರಲ್ಲಿ ಆತ್ಮಹತ್ಯೆ ಪುನರಾವರ್ತನೆ ಆಗಬಹುದು. ಬಹಳ ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರೆ ಅಡ್ಡ ಪರಿಣಾಮಗಳಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ.
ಆತ್ಮಹತ್ಯೆ ಅನುಕರಣೆ ಮಾಡುವ ನಡವಳಿಕೆಯಿಂದಲೂ ನಡೆಯುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೀಟನಾಶಕಗಳು ಸುಲಭವಾಗಿ ಲಭ್ಯವಾಗುವುದರಿಂದ ಕೆಲ ಸಂದರ್ಭಗಳಲ್ಲಿ ದಿಢೀರ್ ನಿರ್ಧಾರಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿಬಿಡುತ್ತದೆ. ಇನ್ನು ಜೀನ್ಸ್, ಮಿದುಳಿನ ರಚನೆ ಸೆರೋಟೋನಿನ್ ಮುಂತಾದವುಗಳು ಆತ್ಮಹತ್ಯೆಯಿಂದ ಮರಣಹೊಂದಿದವರಲ್ಲೂ ಮತ್ತು ಇತರೆ ಕಾರಣಗಳಿಂದ ಮರಣ ಹೊಂದಿದವರಲ್ಲೂ ಭಿನ್ನವಾಗಿರುತ್ತದೆ.
ನಾವು ಶರೀರಿಕ ಆರೋಗ್ಯದ ಬಗ್ಗೆ ಮಾತ್ರ ಯೋಚಿಸದೆ ಮಾನಸಿಕ ಆರೋಗ್ಯದ ಬಗ್ಗೆಯೂ ಯೋಚಿಸಬೇಕು. ಮಾನಸಿಕ ಆರೋಗ್ಯ ದೃಢವಾಗಿದ್ದರೆ ಆತ್ಮಹತ್ಯೆಯಂತಹ ಆಲೋಚನೆಗಳು ನಮ್ಮನ್ನು ಸುಳಿಯದೆ, ಎಲ್ಲ ಸಮಸ್ಯೆಗಳನ್ನು ನಿಂತು ಎದುರಿಸುತ್ತೇನೆ ಎಂಬ ಮನೋ ಸ್ಥೈರ್ಯವನ್ನು ತುಂಬುತ್ತದೆ. ಅದಕ್ಕಿಂತ ಹೆಚ್ಚಾಗಿ ಎಲ್ಲದಕ್ಕೂ ಆತ್ಮಹತ್ಯೆ ಪರಿಹಾರ ಅಲ್ಲ ಎಂಬುದನ್ನು ಸದಾ ನೆನಪಲ್ಲಿಟ್ಟುಕೊಳ್ಳಬೇಕು.