ನವದೆಹಲಿ: ಲಡಾಖ್ನಲ್ಲಿ ಸೇನಾ ವಾಹನವೊಂದು ನದಿಗೆ ಬಿದ್ದ ಪರಿಣಾಮ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಹಾಗೂ ಎಂಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಲೇಹ್ನಿಂದ 150 ಕಿಮೀ ದೂರದಲ್ಲಿರುವ ಕಿಯಾರಿಯಲ್ಲಿ ಸಂಜೆ 4 ರಿಂದ 5 ಗಂಟೆಯ ನಡುವೆ ಅಪಘಾತ ಸಂಭವಿಸಿದೆ.
ಒಂದು ಮಾರುತಿ ಜಿಪ್ಸಿ, ಟ್ರಕ್ ಮತ್ತು ಆಂಬುಲೆನ್ಸ್ ಸೇರಿದಂತೆ ಮೂರು ವಾಹನಗಳಲ್ಲಿ ಒಟ್ಟು ಮೂವರು ಅಧಿಕಾರಿಗಳು, ಇಬ್ಬರು ಜೆಸಿಒಗಳು ಮತ್ತು 34 ಜವಾನರು ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಸೇನೆ ಅಧಿಕೃತ ಮೂಲಗಳು ತಿಳಿಸಿವೆ.
ಘಟನೆ ಕುರಿತಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಲಡಾಖ್ನ ಲೇಹ್ ಬಳಿ ಅಪಘಾತದಲ್ಲಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ದುಃಖಿತ ಕುಟುಂಬಗಳೊಂದಿಗೆ ನಾನು ಸಹ ಭಾಗಿಯಾಗಿದ್ದೇನೆ. ಗಾಯಗೊಂಡ ಸಿಬ್ಬಂದಿಯನ್ನು ಫೀಲ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.