ನವದೆಹಲಿ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದು ಬೆಂಗಳೂರಿನಲ್ಲಿ ವಾಸವಿದ್ದ ವ್ಯಕ್ತಿಯೊಬ್ಬನನ್ನು ಕೇರಳದಲ್ಲಿ ಎನ್ಐಎ ಬಂಧಿಸಿದೆ.
ಅಕ್ರಮ ವಲಸೆಗಾರರ ವಿರುದ್ಧ ಕಳೆದ ತಿಂಗಳಿನಿಂದ ಎನ್ಐಎ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಇದು 11ನೇ ಬಂಧನವಾಗಿದೆ. ಬಂಧಿತ ಸೌಧಿ ಝಾಕಿರ್ ವಿರುದ್ಧ ಮಾನವ ಕಳ್ಳಸಾಗಣೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಝಾಕಿರ್ ಬಾಂಗ್ಲಾದೇಶ ಮತ್ತು ಭಾರತದ ಗಡಿಯಲ್ಲಿನ ಬೇನಾಪೋಲ್ ಬಳಿ ಅಕ್ರಮವಾಗಿ ಭಾರತ ಪ್ರವೇಶಿಸಿ, ಬಳಿಕ ಬೆಂಗಳೂರಿನ ಬೆಳ್ಳಂದೂರಿನಲ್ಲಿ ವಾಸಿಸುತ್ತಿದ್ದ. ಇಲ್ಲಿ ಈತ ತ್ಯಾಜ್ಯ ಸಂಗ್ರಹಣ ಘಟಕ ಸ್ಥಾಪಿಸಿದ್ದಲ್ಲದೇ ಅಕ್ರಮವಾಗಿ ವಲಸೆ ಬಂದ ವಿದೇಶಿ ಪ್ರಜೆಗಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಎಂದು ಎನ್ಐಎ ವಕ್ತಾರ ಹೇಳಿದ್ದಾರೆ.
ಈ ನಡುವೆ, ‘ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಮಾನವ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ. ಈತ ಅಸ್ಸಾಂ, ತ್ರಿಪುರಾದಲ್ಲಿ ಸಕ್ರಿಯವಾಗಿರುವ ಮಾನವ ಕಳ್ಳಸಾಗಣೆ ಜಾಲದ ಜೊತೆ ಸಂಪರ್ಕದಲ್ಲಿದ್ದಾನೆ’ ಎಂಬುದನ್ನು ಆಧರಿಸಿ ನವೆಂಬರ್ 7ರಂದು ಎನ್ಐಎ ಪ್ರಕರಣ ದಾಖಲಿಸಿತ್ತು.
ಇದಾದ ಬಳಿಕ ಎನ್ಐಎ ದೇಶಾದ್ಯಂತ ಶೋಧ ಕಾರ್ಯ ನಡೆಸಿದ್ದು, ಝಾಕಿರ್ನ ಬೆಂಗಳೂರು ಮನೆಯಲ್ಲೂ ಹುಡುಕಾಟ ನಡೆಸಿತ್ತು. ಆದರೆ ಈ ವೇಳೆ ಕೇರಳಕ್ಕೆ ಓಡಿಹೋಗಿ ಕೊಚ್ಚಿಯಲ್ಲಿ ತಲೆ ಮರೆಸಿಕೊಂಡಿದ್ದ ಝಾಕಿರ್ನನ್ನು ಬಂಧಿಸುವಲ್ಲಿ ಎನ್ಐಎ ಸಫಲವಾಗಿದೆ.