ಉಡುಪಿ: ಉಡುಪಿ ನೇಜಾರು ತೃಪ್ತಿ ನಗರದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು.
ಹತ್ಯೆ ವಿವಿಧ ಆಯಾಮಗಳನ್ನು ಪಡೆದುಕೊಂಡಿದ್ದು, ಹಾಡಹಗಲೇ ಬರ್ಬರವಾಗಿ ನೆತ್ತರಕೋಡಿ ಹರಿಸಿದ್ದ ಆರೋಪಿಯನ್ನು ಸೆರೆಹಿಡಿಯಲು ಉಡುಪಿ ಪೊಲೀಸರು 5 ತಂಡಗಳನ್ನು ರಚಿಸಿದ್ದರು. ಮೊದಲು ಹತ್ಯೆ ಆರೋಪಿ ಕೇರಳಕ್ಕೆ ಪರಾರಿಯಾಗಿದ್ದಾನೆ ಎಂಬ ಸುದ್ದಿ ಹರಡಿತ್ತು. ಬಳಿಕ ಮಂಗಳವಾರ ರಾತ್ರಿ ವೇಳೆ ಶಂಕಿತ ಆರೋಪಿಯನ್ನು ಚಿಕ್ಕೋಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ಭಗ್ನಗೊಂಡ ಪ್ರೇಮ ನೆತ್ತರ ಕೋಡಿ ಹರಿಸುವವರೆಗೆ: ಆದರೆ ಬರ್ಬರ ಹತ್ಯೆಗೆ ಭಗ್ನ ಪ್ರೇಮ ಕಾರಣ ಎನ್ನಲಾಗುತ್ತಿದೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದು, ಉಡುಪಿಯಲ್ಲಿ ಕೊಲೆ ಮಾಡಿದ ಬಳಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ. ಆತನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪ್ರವೀಣ್ ಅರುಣ್ ಸಿಐಎಸ್ಎಫ್ ಸಿಬ್ಬಂದಿಯಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಜ್ ಪರಿಚಯವಾಗಿ ಇಬ್ಬರು ಸ್ವಲ್ಪ ಸಮಯ ಆತ್ಮೀಯವಾಗಿದ್ದರು. ಆದರೆ ನಂತರ ಅಯ್ನಾಜ್ ಆತನಿಂದ ದೂರವಾಗಿದ್ದಳು. ಇದರಿಂದ ಕುಪಿತನಾಗಿ ಭಗ್ನಪ್ರೇಮಿಯಾಗಿದ್ದ ಪ್ರವೀಣ್ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಸಿಕ್ಕ ಸಿಕ್ಕವರನ್ನೆಲ್ಲ ಕ್ಷಣಮಾತ್ರದಲ್ಲಿ ಇರಿದುಕೊಂದ: ಭಾನುವಾರ ಅಯ್ನಾಜ್ಳನ್ನು ಹುಡುಕಿಕೊಂಡು ಉಡುಪಿಗೆ ಬಂದಿದ್ದ ಕೊಲೆಗೆ ಪೂರ್ವ ತಯಾರಿ ಮಾಡಿದ್ದ. ಅಯ್ನಾಜ್ಳಿಗೆ ಚೂರಿ ಇರಿಯುತ್ತಿದ್ದಾಗ ಆಕೆಯನ್ನು ರಕ್ಷಿಸಲು ಬಂದ ತಾಯಿ, ಸಹೋದರಿಗೂ ಪ್ರವೀಣ್ ಚೂರಿಯಿಂದ ಇರಿದಿದ್ದಾನೆ. ಮನೆಯಲ್ಲಿ ಗಲಾಟೆಯಾಗುತ್ತಿದ್ದುದ್ದನ್ನು ಗಮನಿಸಿದ ಹೊರಗೆ ಆಟವಾಡುತ್ತಿದ್ದ ಅಸೀಮ್ ಮನೆಗೆ ಓಡಿ ಬಂದಿದ್ದಾನೆ. ಈ ವೇಳೆ ಅಸೀಮ್ಗೂ ಚೂರಿಯಿಂದ ಇರಿದು ಪ್ರವೀಣ್ ಅಲ್ಲಿಂದ ಪರಾರಿಯಾಗಿದ್ದನು. ನಾಲ್ಕು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದರು.