ಶಿವಮೊಗ್ಗ: ಊಟ ಪಾರ್ಸಲ್ ತೆಗೆದುಕೊಳ್ಳಲು ಹೊಟೇಲ್ಗೆ ಬಂದಿದ್ದ ವೇಳೆ ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಿನ್ನೆ (ಡಿ.10) ರಾತ್ರಿ ನಡೆದಿದೆ.
ಗೋಕುಲ್ ಕೃಷ್ಣನ್ ಹಲ್ಲೆಗೊಳಗಾದ ಬಿಜೆಪಿ ಮುಖಂಡನಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಊಟ ಪಾರ್ಸಲ್ ತೆಗೆದುಕೊಳ್ಳಲು ಗೋಕುಲ್ ಅವರು ಭದ್ರಾವತಿಯ ಬಿ.ಹೆಚ್.ರಸ್ತೆಯ ಕಾಂಚನ್ ಹೋಟೆಲ್ಗೆ ಹೋಗಿದ್ದರು. ಈ ವೇಳೆ ಹೊಟೇಲ್ಗೆ ನುಗ್ಗಿದ 6-7 ದುಷ್ಕರ್ಮಿಗಳು ದೊಣ್ಣೆಯಿಂದ ಗೋಕುಲ್ ಕೃಷ್ಣನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗೋಕುಲ್ ಕೃಷ್ಣನ್ ಹಣೆ ಮತ್ತು ಕಿವಿಗೆ ಬಲವಾಗಿ ಹೊಡೆತ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿದ್ದು ಕೂಡಲೇ ಅವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕುಲ್ ಅವರು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ವಿರುದ್ಧ ಅಕ್ರಮ ದಂಧೆ ಕುರಿತು ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಪೋಸ್ಟ್ ಮಾಡಿದ ಬಳಿಕ ನಿನ್ನೆ ಕಾರು ಜಖಂಗೊಳಿಸಿದ್ದ ದುಷ್ಕರ್ಮಿಗಳ ರಾತ್ರಿ ವೇಳೆ ಬಿಜೆಪಿ ಮುಖಂಡ ಗೋಕುಲ್ಗೆ ಹಲ್ಲೆ ನಡೆಸಿದ್ದಾರೆ.
ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದೆ ಹಲ್ಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಘಟನೆಯನ್ನು ಶಿವಮೊಗ್ಗ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಖಂಡಿಸಿದ್ದಾರೆ.