ಮಳೆಗಾಲದಲ್ಲಿ ಚಹಾದ ಜೊತೆಗೆ ಬಿಸಿ ಬಿಯಾಗಿ ಏನಾದರು ತಿನ್ನಲು ಸಿಕ್ಕರೆ ಎಷ್ಟೊಂದು ಮಜವಾಗಿರುತ್ತದೆ. ಮಳೆಗಾಲಕ್ಕೆಂದೆ ತೆಗೆದಿಟ್ಟ ಉಪ್ಪುನೀರಿನ ಹಲಸಿನಕಾಯಿ ಸೊಳೆಯಿಂದ ಗರಿ ಗರಿಯಾದ ಉಂಡಲಕಾಳನ್ನು ಮಾಡಬಹುದು. ಅದರ ಸುಲಭ ವಿಧಾನ ಹೀಗಿದೆ…..
ಬೇಕಾಗುವ ಪದಾರ್ಥಗಳು :
• 2ಲೀಟರ್ ಉಪ್ಪಿನಲ್ಲಿ ಹಾಕಿಟ್ಟ ಹಲಸಿನಕಾಯಿ ತೊಳೆ
• ಎಣ್ಣೆ – 1/2 ಲೀ
• ಬೆಳ್ತಿಗೆ ಅಕ್ಕಿ – 1 ಕಪ್ಪ್
• ತೆಂಗಿನಕಾಯಿ ತುರಿ – 1/2 ಹೋಳು
• ಸ್ವಲ್ಪ ಜೀರಿಗೆ
• ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಉಪ್ಪಿನ್ನಲ್ಲಿ ಹಾಕಿಟ್ಟ ಹಲಸಿನಕಾಯಿ ತೊಳೆನ್ನ ತೆಗೆದು ಚೆನ್ನಾಗಿ ತೊಳೆಯಬೇಕು. ನೀರನ್ನು ಹಾಕಿಟ್ಟು ಆಗಾಗಾ ನೀರನ್ನು ಬದಲಾಯಿಸುತ್ತಿರಬೇಕು. ತೊಳೆಯಲ್ಲಿನ ಉಪ್ಪು ಹದಕ್ಕೆ ಬಂದ ಮೇಲೆ, ನೀರಿನಿಂದ ತೆಗೆದು ಸರಿಯಾಗಿ ಹಿಂಡಿಕೊಳ್ಳ ಬೇಕು. ಗಂಟೆ ನೆನೆಸಿಟ್ಟ ಅಕ್ಕಿಯನ್ನು ತೊಳೆದು ಅದಕ್ಕೆ ಹಲಸಿನಕಾಯಿ ತೊಳೆ, ತೆಂಗಿನ ತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಿಟ್ಟನ್ನು ಗಟ್ಟಿಯಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಸ್ವಲ್ಪ ಜೀರಿಗೆ ಸೇರಿಸಿ ಕಲಸಿಕೊಳ್ಳಿ. ನಂತರ ಸಣ್ಣ ಸಣ್ಣ ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.
ಬಾಣಲೆಯಲ್ಲಿ ಎಣ್ಣೆ ಇಟ್ಟು ಅದು ಕಾದ ನಂತರ ಉಂಡೆಗಳನ್ನು ಹಾಕ ಬೇಕು. ಎಣ್ಣೆಯಲ್ಲಿ ಹಕಿದ ಕೂಡಲೇ ಮಗುಚಬಾರದು. ಸ್ವಲ್ಪ ಹೊತ್ತಿನ ನಂತರ ಮಗುಚಬೇಕು ಇಲ್ಲವಾದಲ್ಲಿ ಇಟ್ಟು ಸೌಟಿಗೆ ಅಂಟಿಕೊಳ್ಳಬಹುದು. ಸ್ವಲ್ಪ ಸಮಯದ ವರೆಗೂ ಎಣ್ಣೆಯಲ್ಲಿ ಹುರಿದು ಕೆಂಪಗೆ ಆದ ನಂತರ ಎಣ್ಣೆಯ ಅಂಶವನು ತೆಗೆದು ಗಾಳಿ ಆಡದ ಡಬ್ಬದಲ್ಲಿಟ್ಟರೆ ಎರಡರಿಂದ ಮೂರು ತಿಂಗಳವರಗೂ ಕೆಡುವುದಿಲ್ಲ.