ಮನೆ ಬಾಡಿಗೆ ನೀಡದೆ, ಮನೆ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನು ಸ್ಯಾಂಡಲ್ ವುಡ್ ನ ಖ್ಯಾತ ಸ್ಟಾರ್ ನಟ ಯಶ್ ಅವರ ತಾಯಿ ಎದುರಿಸುತ್ತಿದ್ದಾರೆ. ಇದೀಗ ಇನ್ನೇನು ಮೂರೇ ತಿಂಗಳಿನಲ್ಲಿ ಮನೆ ಖಾಲಿ ಮಾಡಬೇಕೆಂದು ಬೆಂಗಳೂರಿನ 42ನೇ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಬನಶಂಕರಿ ಮೂರನೇ ಹಂತದಲ್ಲಿರುವ ಮುನಿಪ್ರಸಾದ್ ಎಂಬುವವರ ಮನೆಯಲ್ಲಿದ್ದ ನಟ ಯಶ್ ಮತ್ತು ಅವರ ಕುಟುಂಬ ಮನೆಯನ್ನೂ ಖಾಲಿ ಮಾಡುತ್ತಿಲ್ಲ, ಬಾಡಿಗೆಯನ್ನೂ ನೀಡುತ್ತಿಲ್ಲ, ಎಂದು ಆರೋಪಿಸಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.
ನಟ ಯಶ್ ಕುಟಂಬದವರು ಬಾಕಿ ಉಳಿಸಿಕೊಂಡಿರುವ ಸುಮಾರು 9.6 ಲಕ್ಷ ಬಾಕಿ ಹಣವನ್ನು ವಾಪಸ್ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
2010ರಲ್ಲಿ ನಟ ಯಶ್ ಮತ್ತು ಅವರ ಕುಟುಂಬದವರು ಬನಶಂಕರಿ ಮೂರನೇ ಹಂತದ, ಮೂರನೇ ಬ್ಲಾಕ್ ನಲ್ಲಿರುವ ಮನೆ ನಂಬರ್ 757ನ್ನು ಬಾಡಿಗೆಗೆ ಪಡೆದಿದ್ದರು.2010ರಲ್ಲಿ ನಡೆದ ಕರಾರಿನ ಪ್ರಕಾರ ನಟ ಯಶ್ ಅವರ ತಾಯಿ ಪುಷ್ಪಾ ಅವರು ಕರಾರಿನ ಪ್ರಕಾರ 40 ಸಾವಿರ ರೂಪಾಯಿಗೆ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಒಂದು ವರ್ಷದವರೆಗೆ ಬಾಡಿಗೆ ನೀಡಿ ತದನಂತರ ನೀಡುತ್ತಿಲ್ಲ ಎಂದು ಮುನಿಪ್ರಸಾದ್ ಕೋರ್ಟ್ ಮೊರೆ ಹೋಗಿದ್ದರು.
5 ಬೆಡ್ ರೂಮ್, 1 ಡೈನಿಂಗ್ ಹಾಲ್, 1 ಹಾಲ್, ಅಡುಗೆ ಮನೆ, ದೇವರ ಕೋಣೆ ಇರುವ ಮನೆಯನ್ನು, ತಮಗೆ ಲಕ್ಕಿ ಎಂದು ಯಶ್ ಅವರು ಖಾಲಿ ಮಾಡದೇ ಉಳಿಸಿಕೊಂಡಿದ್ದರು. ಮಾತ್ರವಲ್ಲದೇ ಮನೆಯನ್ನು ಕೊಂಡುಕೊಳ್ಳುವುದಾಗಿ ಕೂಡ ಕೇಳಿಕೊಂಡಿದ್ದರು. ಆದ್ರೆ ಮನೆ ಮಾರಾಟಕ್ಕೆ ಮಾಲೀಕ ಸಿದ್ಧರಿರಲಿಲ್ಲ.
ಈ ಮೊದಲು ಮನೆ ಮಾಲೀಕರ ಒಪ್ಪಿಗೆಯ ಮೇರೆಗೆ ಸುಮಾರು 40 ಲಕ್ಷ ರೂಪಾಯಿ ಖರ್ಚು ಮಾಡಿ ಇಡೀ ಮನೆಗೆ ಇಂಟೀರಿಯರ್ ಡೆಕೋರೇಷನ್ ಮಾಡಿದ್ದಾಗ ತಮಗೇ ಮಾರಾಟ ಮಾಡ್ತೀವಿ ಎಂದು ಮಾಲೀಕರು ಕೂಡ ಒಪ್ಪಿಕೊಂಡಿದ್ದರು ಎಂದು ಈ ಬಗ್ಗೆ ಈ ಹಿಂದೆ ಕೋರ್ಟ್ ನಲ್ಲಿ ಕೇಸ್ ದಾಖಲಾದಾಗ ಯಶ್ ಕುಟುಂಬ ಪ್ರತಿಕ್ರಿಯೆ ನೀಡಿದ್ದರು.
ಆದರೆ ಈಗ ಮನೆ ಮಾಲೀಕ ಮನೆ ಮಾರಾಟ ಮಾಡಲು ಒಪ್ಪುತ್ತಿಲ್ಲ. ಮಾತ್ರವಲ್ಲದೇ ಕೋರ್ಟ್ ಕೂಡ ವಿಚಾರಣೆ ಮುಗಿಸಿ ತೀರ್ಪು ಪ್ರಕಟಿಸಿದ್ದು, ಮೂರೇ ತಿಂಗಳಲ್ಲಿ ಮನೆ ಖಾಲಿ ಮಾಡಿ, ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣ ನೀಡಬೇಕು ಎಂದು ಆದೇಶ ಹೊರಡಿಸಿದೆ.