ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೂಪರ್ ಹಿಟ್ ಆಗಿದ್ದ ‘ಕನ್ನಡದ ಕೋಟ್ಯಾಧಿಪತಿ’ ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ. ಈಗಾಗಲೇ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಈ ಕಾರ್ಯಕ್ರಮಕ್ಕೆ ಮುನ್ನುಡಿ ಇಡಲಾಗಿದೆ.
ಪ್ರತೀ ಬಾರಿ ಈ ರಿಯಾಲಿಟಿ ಶೋ ಆರಂಭ ಮಾಡುವಾಗ ಸಾರಥ್ಯ ಯಾರು ವಹಿಸಿಕೊಳ್ಳುತ್ತಾರೆ ಅಂತ ಭಾರಿ ಚರ್ಚೆಯಾಗುತ್ತದೆ. ಇಲ್ಲಿಯವರೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ರಿಯಾಲಿಟಿ ಶೋವನ್ನು ಬಹಳ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದರು.
ಇದೀಗ ಈ ಬಾರಿಯ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಾಗೂ ವಿಶೇಷತೆ ಅಂದ್ರೆ, ಕಂಚಿನ ಕಂಠದ ನಿರೂಪಕ ರಮೇಶ್ ಅರವಿಂದ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿರುವುದು.
ಜೀ ಕನ್ನಡ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಸೇರಿದಂತೆ ಸಾಕಷ್ಟು ಟಿವಿ ಕಾರ್ಯಕ್ರಮದ ಮೂಲಕ ಜನಮೆಚ್ಚುಗೆ ಗಳಿಸಿರುವ ರಮೇಶ್ ಅವರು ಇನ್ನುಮುಂದೆ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಇನ್ನು ಕೋಟ್ಯಾಧಿಪತಿಯ ಹಾಟ್ ಸೀಟ್ ನಲ್ಲಿ ಮೊದಲ ಕೂರುವ ಸ್ಪರ್ಧಿ ಯಾರು ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದಕ್ಕೆ ತಕ್ಕಂತೆ ರಮೇಶ್ ಅರವಿಂದ್ ಅವರಿಗೂ ಒಂದು ಆಸೆ ಇದೆ. ಅದೇನಪ್ಪಾ ಅಂದ್ರೆ ಮೊದಲು ಆ ಹಾಟ್ ಸೀಟ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂರಬೇಕು ಅನ್ನೋದು ಅವರ ಬಯಕೆ.
‘ಕನ್ನಡದ ಕೋಟ್ಯಾಧಿಪತಿ 3 ‘ ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆ ಮೇ 7 ರಿಂದ ಶುರು ಆಗಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನೋಡುಗರು ಎಸ್.ಎಂ.ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ.
ಹತ್ತು ದಿನಗಳ ಕಾಲ ಕೇಳಲಾಗುವ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಹಾಟ್ ಸೀಟ್ ನಲ್ಲಿ ಕುಳಿತು ಕೋಟಿಗಳಿಸುವ ಅವಕಾಶ ಪಡೆಯಬಹುದು.