ಬೆಂಗಳೂರು: ನೆಲಮಂಗಲ ಸಮೀಪದ ಸೋಲೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾಹಾನದಿ ಧಾರಾವಾಹಿ ನಟಿ ರಚನಾ(23) ಹಾಗೂ ಸಹನಟ ಜೀವನ್(25) ತಡರಾತ್ರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಟ ಕಾರ್ತಿಕ್ ಹುಟ್ಟು ಹಬ್ಬದ ನಿಮಿತ್ತ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ಬಿಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತಗತು ಎರಿಕ್ ಸಹ ನಟರಿಗೆ ಗಾಯಗಳಾಗಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ದೇಹಗಳನ್ನ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ತಡರಾತ್ರಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಇವರು ಚಲಾಯಿಸುತ್ತಿದ್ದ ಟಾಟಾ ಸಫಾರಿ ಕಾರು ರಸ್ತೆಬದಿ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಬಸ್ ಬಂತೆಂದು ಎಡಭಾಗಕ್ಕೆ ಕಾರನ್ನು ಚಲಾಯಿಸಿ ನಿಂತಿದ್ದ ಕ್ಯಾಂಟರ್ ಗೆ ಸಫಾರಿ ಕಾರು ಡಿಕ್ಕಿ ಹೊಡೆದಿದ್ದಾಗಿ ಗಾಯಾಳುಗಳು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಮೃತ ಕಿರುತೆರೆ ನಟಿ ರಚನಾ ತ್ರಿವೇಣಿ ಸಂಗಮ, ಮಧುಬಾಲ, ಮಹಾನದಿ ಧಾರವಾಹಿಯಲ್ಲಿ ನಟಿಸಿದ್ದು, ಮಹಾನದಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಘಟನೆ ಸಂಬಂಧ ಮಾಗಡಿಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.