ಇತ್ತೀಚೆಗೆ ಬಿಡುಗಡೆಯಾಗಿರುವ “ಇದೊಳ್ಳೆ ರಾಮಾಯಣ” ಟೀಸರ್ ನೋಡುವಾಗಲೇ ಸಿನೆಮಾದ ಬಗ್ಗೆ ನಿರೀಕ್ಷೆ ಹುಟ್ಟುತ್ತದೆ ಅಷ್ಟರಮಟ್ಟಿಗೆ ಹೊಸತಾಗಿದೆ ಸಿನೆಮಾ. ಏಳೆಂಟು ವರುಷಗಳ ಹಿಂದೆ ಮಲಯಾಳಂನಲ್ಲಿ ಸೂಪರ್ ಹಿಟ್ ಆದ “ಶಟರ್” ಚಿತ್ರವನ್ನು ಪ್ರಕಾಶ್ ರೈ ಅವರಂತಹ ಮಹಾನ್ ಕಲಾವಿದ ಕನ್ನಡಕ್ಕೆ ತರುತ್ತಿದ್ದಾರೆಂಬುದೇ ಒಂದು ಖುಶಿಯ ಸಂಗತಿಯಾದರೆ, ದಶಕಗಳಷ್ಟು ಹಳೇ ಚಿತ್ರವನ್ನು ಈಗಿನ ಜನರೇಷನ್ ಗಾಗಿ ಹೇಗೆ ನಿರೂಪಿಸುತ್ತಾರೆಂಬುದೇ ಒಂದು ಕುತೂಹಲವಾಗಿತ್ತು. ಆದರೀಗ ಟೀಸರ್ ನೋಡಿದರೆ ಮೂಲಕಥೆಯನ್ನು ಮಾತ್ರವೇ ಇಟ್ಟುಕೊಂಡು ತನ್ನದೇ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿರುವುದು ಪ್ರಕಾಶ್ ರೈಯವರ ಸೃಜನಶೀಲತೆಗೆ ಮತ್ತೊಂದು ಸಾಕ್ಷಿ ಅನ್ನಬಹುದು. “ನಾನೂ ನನ್ನ ಕನಸು” ಮತ್ತು “ಒಗ್ಗರಣೆ” ಯಂತಹ ಸದಭಿರುಚಿಯ ಚಿತ್ರಗಳನ್ನು ಕೊಟ್ಟು ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದ ಪ್ರಕಾಶ್ ರೈ ನಿರ್ದೇಶನವೆಂದಾದ ಮೇಲೆ ಅದು ಫ್ಯಾಮಿಲಿ ಪ್ಯಾಕ್ ಎಂಟರ್ ಟೇನರ್ ಖಂಡಿತಾ.
“ಇದೊಳ್ಳೆ ರಾಮಾಯಣ”ದ ಮೇಲೆ ಇನ್ನಷ್ಟು ನಿರೀಕ್ಷೆಗಳು ಗರಿಗೆದರಲು ಕಾರಣ ಚಿತ್ರದ ಪಾತ್ರವರ್ಗ. ಪ್ರಕಾಶ್ ರೈಯವರ ಜೊತೆಯಲ್ಲಿ ಪ್ರಿಯಾಮಣಿ, ಅರವಿಂದ, ಅಚ್ಯುತ್ ಕುಮಾರ್, ರಂಗಾಯಣರಘುರಂತಹ ಅದ್ಭುತ ಕಲಾವಿದರ ಸಮಾಗಮ ಒಂದೆಡೆಯಾದರೆ, ಮುಖೇಶ್ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ, ಇಳಯರಾಜ ಸಂಗೀತ, ಜಯಂತ್ ಕಾಯ್ಕಿಣಿ ಸಾಹಿತ್ಯ, ಜೋಗಿ ಸಂಭಾಷಣೆ ಮತ್ತು ಶಶಿಧರ್ ಅಡಪ ಕಲಾ-ನಿರ್ದೇಶನ ಮತ್ತೊಂದೆಡೆ. ಪ್ರಕಾಶ್ ರೈ ಅವರ ಜೊತೆ ರಾಮ್ ಜಿ ನಿರ್ಮಾಣದ ಸಿನೆಮಾ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣಗೊಂಡು ದಸರಾ ಹಬ್ಬದಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.