ಸ್ಯಾಂಡಲ್ವುಡ್ ನಲ್ಲಿ ಸಿನಿಮಾ ಮಾಡಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಮೆರೆದವರು ಇದ್ದಾರೆ. ಲಾಭ ಮಾಡಿಕೊಂಡು ತಿಜೋರಿ ತುಂಬಿಸಿಕೊಂಡವರೂ ಇದ್ದಾರೆ. ಇವರ ನಡುವೆ ಸಿನಿಮಾ ಮಾಡಿ ಸಾಲದ ಹೊರೆಹೊತ್ತು ಕೊಂಡು ಜೀವನುದ್ದಕ್ಕೂ ಅದನ್ನು ತೀರಿಸುವುದರಲ್ಲೇ ಕಳೆದವರು ಇದ್ದಾರೆ.
ಸಿನಿಮಾರಂಗದವರು ಹೀಗಾಗಿಯೇ ಅದೃಷ್ಟವನ್ನು ನಂಬುತ್ತಾರೆ. ಒಂದೊಳ್ಳೆ ಸಿನಿಮಾ ಮಾಡಿ ಅದು ಬಾಕ್ಸಾಫೀಸಿನಲ್ಲಿ ಥಂಡ ಹೊಡೆದು ನಷ್ಟ ಮಾಡಿಕೊಂಡ ಬೇಕಾದಷ್ಟು ನಿರ್ಪಾಪಕರು ಕಾಣಸಿಗುತ್ತಾರೆ. ಅದೇ ನಿರ್ಮಾಪಕರನ್ನು ಅವರು ನಿರೀಕ್ಷೆ ಮಾಡದ ಸಿನಿಮಾಗಳೇ ಗೆಲ್ಲಿಸಿವೆ. ಹೀಗಾಗಿ ಆಗಾಗ್ಗೆ ಸ್ಯಾಂಡಲ್ವುಡ್ ಸಿನಿಮಾ ಮಾಡಿ ಹೆಸರು ಮಾಡಬೇಕು ಭದ್ರವಾಗಿ ತಳವೂರಬೇಕೆಂದು ಬಯಸಿ ಬರುವ ನಿರ್ಮಾಪಕರು, ನಿರ್ದೇಶಕರು, ನಟ ನಟಿಯರಿಗೇನು ಕೊರತೆಯಿಲ್ಲ. ಪ್ರತಿವರ್ಷ ನೂರಾರು ಸಿನಿಮಾಗಳು ತಯಾರಾಗಿ ತೆರೆಗೆ ಬರುತ್ತಿದ್ದರೂ ಕೆಲವೇ ಕೆಲವಷ್ಟೆ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರುತ್ತವೆ.
ಸಿನಿಮಾ ಮಾಡಿ ಕೈಸುಟ್ಟುಕೊಂಡವರ ದೊಡ್ಡ ಪಟ್ಟಿಯೇ ಇದ್ದರೂ ಹೊಸಬರು ಈ ಕ್ಷೇತ್ರಕ್ಕೆ ಬರುತ್ತಲೇ ಇದ್ದಾರೆ. ಸಾಹಸ ಮಾಡುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಈ ವಾರ ಇಂಜಿನಿಯರ್ಸ್ ಎಂಬ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ಅವರೇಂದ್ರ ಪ್ರಭು ತಯಾರಿ ನಡೆಸಿದ್ದಾರೆ.
ವಿನಯ್ ರತ್ನಸಿದ್ದಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರದ ಬಗ್ಗೆ ಅವರು ಬಹು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಈಗಿನ ಜನರೇಷನ್ ಗೆ ಈ ಚಿತ್ರ ಇಷ್ಟವಾಗುತ್ತದೆ ಎಂಬ ನಂಬಿಕೆಯೂ ಅವರಿಗಿದೆ.
ವಿನಯ್ ರತ್ನಸಿದ್ದಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ನಟಿಸಿರುವ ಈ ಚಿತ್ರಕ್ಕೆ ರವಿ ದೇವ್ ಸಂಗೀತ ನೀಡಿದ್ದಾರೆ. ದೇವು ಛಾಯಾಗ್ರಹಣ ಹಾಗೂ ಶಿವರಾಜ ಮೇಹು ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ಶಮಾ ತಾಜ್, ಚಂದನ, ರಕ್ಷಾ ಶೆಣೈ, ಕಾವ್ಯ ಮುಂತಾದವರಿದ್ದಾರೆ. ಬಿಡುಗಡೆ ಬಳಿಕವಷ್ಟೆ ಇಂಜಿನಿಯರ್ಸ್ ಚಿತ್ರ ಪ್ರೇಕ್ಷಕನ ಮನ ತಟ್ಟುತ್ತಾ ಎಂಬುದು ತಿಳಿದು ಬರಬೇಕಿದೆ.