ಮದುವೆಯಾದ ನಂತರ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಚಿತ್ರರಂಗದಿಂದ ಕೊಂಚ ದೂರವಿದ್ದ ನಟಿ ಅಮೂಲ್ಯ ಅವರು ಇದೀಗ ಏಕಾಏಕಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.
ನಟಿ ಅಮೂಲ್ಯ ಅವರ ಮಾವ ರಾಮಚಂದ್ರ ಅವರು ಬಿಜೆಪಿ ತೊರೆದು ಜೆ.ಡಿ.ಎಸ್ ಪಕ್ಷ ಸೇರಿರುವ ಹಿನ್ನಲೆಯಲ್ಲಿ, ಅಮೂಲ್ಯ ಅವರು ತೆನೆ ಹೊರಲು ಸಿದ್ಧವಾದಂತಿದೆ.
ಇನ್ನು ಅಮೂಲ್ಯ ಅವರ ಮಾವ ರಾಮಚಂದ್ರ ಅವರು ಅಧಿಕೃತವಾಗಿ ಜೆ.ಡಿ.ಎಸ್ ಪಕ್ಷ ಸೇರಿಕೊಂಡಿದ್ದು, ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಮೂಲಕ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಜೊತೆಗೆ ಇದ್ದ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಅವರು ಜೆ.ಡಿ.ಎಸ್ ಶಾಲು ಹೊದ್ದು ಜೈಕಾರ ಹಾಕಿದ್ದಾರೆ.
ಮಾಜಿ ಕಾರ್ಪೋರೇಟರ್ ಆಗಿರುವ ಅಮೂಲ್ಯ ಅವರ ಮಾವ ರಾಮಚಂದ್ರ ಅವರು ಈ ಬಾರಿ ಬಿಜೆಪಿ ಪಕ್ಷದಿಂದ ಆರ್.ಆರ್ ನಗರದಲ್ಲಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಪಕ್ಷ ಬದಲಾಯಿಸಿ, ಜೆ.ಡಿ.ಎಸ್ ಪಕ್ಷದ ಮೂಲಕ ಅಖಾಡಕ್ಕೆ ಇಳಿಯುವ ಯೋಜನೆ ಹಾಕಿದ್ದಾರೆ.