ಬೇಲೂರು: ಶತನಾಟಕಕಾರ ಬೇಲೂರು ಕೃಷ್ಣಮೂರ್ತಿ ರಚಿಸಿರುವ ತ್ಯಾಗಿ ನಾಟಕವು ರಂಗಭೂಮಿಯಲ್ಲಿ ಸುಮಾರು 1000ಕ್ಕೂ ಹೆಚ್ಚು ಪ್ರದರ್ಶನಗೊಂಡು ಇಂದು ಚಲನಚಿತ್ರವಾಗಿ ಮೂಡಿ ಬರುತ್ತಿದೆ ಎಂದು ಚಲನಚಿತ್ರ ಹಾಸ್ಯ ನಟ ಡಿಂಗ್ರಿ ನಾಗರಾಜ್ ತಿಳಿಸಿದರು.
ಪಟ್ಟಣದ ಬೇಲೂರು ಕೃಷ್ಣಮೂರ್ತಿ ಮನೆಯಲ್ಲಿ ತ್ಯಾಗಿ ಚಿತ್ರತಂಡ ಹಾಗೂ ನಿರ್ದೇಶಕರು ಸೇರಿದಂತೆ ಅವರ ಮನೆಗೆ ಬಂದು ಅವರ ಆಶೀರ್ವಾದ ಪಡೆದು ನಂತರ ಮಾತನಾಡಿದ ಅವರು, ಸುಮಾರು ನೂರಾರು ನಾಟಕ ಬರೆದಿರುವ ಬೇಲೂರು ಕೃಷ್ಣಮೂರ್ತಿ ಅವರ ಹಲವು ನಾಟಕಗಳು ಚಿತ್ರಗಳಾಗಿ ತೆರೆಕಂಡಿದ್ದು, ಅದರಲ್ಲಿ ಅವರ ತ್ಯಾಗಿ ನಾಟಕವು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು ಇಂದು ಚಲನಚಿತ್ರವಾಗಿ ಮೂಡಿಬಂದು ಯುವ ಜನಾಂಗಕ್ಕೆ ಮುಟ್ಟುವಂತಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿತ್ರದ ನಿರ್ಮಾಪಕರಾದ ದಿನೇಶ್ ಹೆಗಡೆ ಮಾತನಾಡಿ, ಮಲೆನಾಡು ಭಾಗ ಸೇರಿದಂತೆ ಬೆಂಗಳೂರು, ಚಿಕ್ಕಬಳ್ಳಾಪುರ, ಸಾಗರ ಸುತ್ತಮುತ್ತ ಪ್ರಕೃತಿಯ ಸುಂದರ ಪ್ರದೇಶದಲ್ಲಿ ಚಿತ್ರೀಕರಣ ಮುಗಿಸಿ ಕೊನೆಹಂತದದಲ್ಲಿ ಬೇಲೂರಿನ ಹೊರಾಂಗಣದಲ್ಲಿ ಚಿತ್ರಣ ಮುಗಿಸಿ ಶತನಾಟಕಕಾರ ಬೇಲೂರಿನ ಕೃಷ್ಣಮೂರ್ತಿ ಮನೆಯಲ್ಲಿ ಇಡೀ ಚಿತ್ರ ತಂಡ ಅವರ ಆಶೀರ್ವಾದ ಪಡೆದು ಯುವ ನಾಯಕ ಹಾಗೂ ನಾಯಕಿಯರಾದ ಸಂತೋಷ್ ಹಾಗೂ ಪಲ್ಲವಿ ಇವರು ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರರಂಗದ ಹಾಸ್ಯ ಕಲಾವಿದರು ಭಾಗವಹಿಸಿದ್ದು, ಈ ಚಿತ್ರ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ಚಿತ್ರದ ಸಂಭಾಷಣೆ ಹಾಗೂ ರಚನೆಕಾರ ಅಡಗೂಡಿ ಶ್ರೀನಿವಾಸ್ ಮಾತನಾಡಿ, ತ್ಯಾಗಿ ಒಂದು ಕೌಟುಂಬಿಕ ಸಾಂಸಾರಿಕ ಚಿತ್ರವಾಗಿದ್ದು, ಪ್ರತಿಯೊಬ್ಬ ಯುವ ಜನಾಂಗದವರೂ ಸಹ ನೋಡಬಹುದಾದ ಚಿತ್ರವಾಗಿದ್ದು, ಕೋವೀಡ್ ಹಿನ್ನಲೆಯಲ್ಲಿ ಚಿತ್ರ ತಡವಾಗಿದ್ದರಿಂದ ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ತೊಚ ಅನಂತ ಸುಬ್ಬರಾಯ್, ಬೇಲೂರು ಕೃಷ್ಣಮೂರ್ತಿ, ಚಿತ್ರದ ನಿರ್ದೇಶಕ ಬಾಲು ನಾಗರಾಜ್. ನಾಯಕ ಸಂತೋಷ್, ನಾಯಕಿ ಪಲ್ಲವಿ, ಅಶ್ವಥ್, ಭಾರ್ಗವ ಸೇರಿದಂತೆ ಇತರರು ಹಾಜರಿದ್ದರು.