ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಗೆ ಪ್ರವಾಸಿಗರನ್ನ ಆಕರ್ಷಿಸುವ ದೃಷ್ಟಿಯಿಂದ ಮೂರು ದಿನಗಳ ಕಾಲ ಅರಮನೆ ಮುಂಭಾಗದಲ್ಲಿ ಯುಗಾದಿ ಸಂಗೀತೋತ್ಸವನ್ನ ಏರ್ಪಡಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಯುಗಾದಿ ಸಂಗೀತೋತ್ಸವಕ್ಕೆ ಮತ್ತೆ ಚಾಲನೆ ದೊರೆತಿದ್ದು, ಮೈಸೂರು ಅರಮನೆ ಮಂಡಳಿ ವತಿಯಿಂದ ಏಪ್ರಿಲ್ 29 ರಿಂದ ಮೇ 1 ರವರೆಗೆ ಅರಮನೆ ಆವರಣದಲ್ಲಿ ಯುಗಾದಿ ಸಂಗೀತೋತ್ಸವ ನಡೆಯಲಿದೆ.
ಬೇಸಿಗೆ ರಜೆಯ ಜೊತೆಗೆ ಶನಿವಾರ, ಭಾನುವಾರ ಮತ್ತು ಸೋಮವಾರ ಬಂದಿರುವ ಸಾರ್ವತ್ರಿಕ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರು ಸಾಗರೋಪಾದಿಯಲ್ಲಿ ಅರಮನೆ ನಗರಕ್ಕೆ ಆಗಮಿಸುತ್ತಿದ್ದು, ಅವರೆಲ್ಲರಿಗೂ ಯುಗಾದಿ ಸಂಗೀತೋತ್ಸವದ ಸಂಜೆ ರಸದೌತಣ ದೊರೆಯಲಿದೆ.
ಏಪ್ರಿಲ್ 29 ರಂದು ಸಂಜೆ 6 ರಿಂದ 7 ಗಂಟೆಗೆ ಕನ್ನಡ ಮತ್ತು ಆಂಗ್ಲ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ, ಸಂಜೆ 7-30 ರಿಂದ 9-30 ರವರೆಗೆ ಅಜಯ್ ವಾರಿಯರ್ ಮತ್ತು ತಂಡದವರಿಂದ ಗಾನಸುಧೆ, ಏಪ್ರಿಲ್ 30 ರಂದು ಸಂಜೆ 7 ರಿಂದ 9 ರವರೆಗೆ ಸಂಗೀತ ವಿದ್ಯಾನಿಧಿ ಶ್ರೀ ವಿದ್ಯಾಭೂಷಣ್ ಮತ್ತು ಬಳಗದಿಂದ ದೇವರ ನಾಮ ಗಾಯನ, ಮೇ 1 ರಂದು ಸಂಜೆ 7 ರಿಂದ 9 ರವರೆಗೆ ಅಂತಾರಾಷ್ಟ್ರೀಯ ವೈಲಿನ್ ವಾದಕರಾದ ಡಾ. ಮೈಸೂರು ಮಂಜುನಾಥ್ ಮತ್ತು ನಾಗರಾಜ್ ಹಾಗೂ ವೃಂದದವರಿಂದ ನಾದ ವೈಭವ ಕಾರ್ಯಕ್ರಮಗಳು ನಡೆಯಲಿದೆ.