ಉಡುಪಿ: ಡಾ. ಜಿ. ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು. ಉಡುಪಿ ಜಿಲ್ಲಾ ಲೀಡ್ ಕಾಲೇಜು, ಉಡುಪಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಪೋಲೀಸ್ ಇಲಾಖೆ, ಜಿಲ್ಲಾ ಅಂಗವಿಕಲ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಉಡುಪಿ ಇವರ ಜಂಟಿ ಸಹಯೋಗದಿಂದ ನಶಾ ಮುಕ್ತ ಭಾರತ ಅಭಿಯಾನ ಮತ್ತು ಎನ್.ಎಸ್.ಎಸ್. ಸ್ವಯಂಸೇವಕರಿಗೆ ಕಾನೂನು ಜಾಗೃತಿ ಕಾರ್ಯಗಾರ ಕಾಲೇಜಿನ ಯು.ಜಿ. ಸಭಾಂಗಣದಲ್ಲಿ ಬುಧವಾರ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು, ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗದೆ, ಕೆಟ್ಟ ವ್ಯಸನಗಳ ದಾಸರಾಗದೆ, ಉತ್ತಮ ವ್ಯಸನಗಳಾದ ಪುಸ್ತಕ ಓದುವುದು, ಉತ್ತಮ ಚಿಂತನೆ, ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ನಶಾ ಮುಕ್ತ ಭಾರತದ ಪರಿಕಲ್ಪನೆಯು ಕೇವಲ ಅಭಿಯಾನ ಮತ್ತು ಕಾರ್ಯಗಾರಗಳಿಂದ ಸಾಧ್ಯವಿಲ್ಲ. ಕಾನೂನಿನ ಅರಿವು, ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಕೆಯಾಗಿ ಅಧ್ಯಯನದ ವಿಷಯವಾಗಬೇಕು. ಧ್ಯಾನ, ಯೋಗ ಮತ್ತು ಕ್ರೀಡಾ ಚಟುವಟಿಕೆಗಳಿಂದ ಮಾಧಕ ವ್ಯಸನಿಗಳ ಮಾನಸಿಕ ಬದಲಾವಣೆ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್. ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಜಿ. ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಮಾತನಾಡಿ, ಆರೋಗ್ಯವಂತ ಭಾರತಕ್ಕೆ ಆರೋಗ್ಯವಂತ ಯುವಜನತೆಯ ಕೊಡುಗೆ ಮುಖ್ಯವಾದುದು. ಯುವಜನತೆ ಮುಕ್ತ ಮನಸ್ಸನ್ನು ಹೊಂದಿಕೊಂಡು ಆರೋಗ್ಯವಂತ ಚಿಂತನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯವಸ್ಥಿತ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು.
ಮಣಿಪಾಲ ಠಾಣೆಯ ಉಪನಿರೀಕ್ಷಕಿ ನಿಧಿ ಎನ್.ಎಸ್.ಎಸ್. ಸ್ವಯಂ ಸೇವಕರಿಗೆ ಜಿಲ್ಲಾ ಮಟ್ಟದ ನಶಾ ಮುಕ್ತ ಭಾರತ ಅಭಿಯಾನ ಮತ್ತು ಜಾಗೃತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಜಿಲ್ಲೆಯ ಬೇರೆ ಬೇರೆ ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ., ಮಾದಕ ದ್ರವ್ಯ ವ್ಯಸನ ತಡೆ ಸಮಿತಿ ಸಂಚಾಲಕಿ ಶುಭಾ ಬಿ.ಎಸ್., ಎನ್ ಎಸ್ ಎಸ್ ಸಂಚಾಲಕರಾದ ಡಾ. ರಾಜೇಂದ್ರ ಕೆ. ಮತ್ತು ಕು. ರಮ್ಯ ವಿ. ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್ ಬಲ್ಲಾಳ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಗೌರಿ ಕಾರ್ಯಕ್ರಮ ನಿರೂಪಿಸಿದರು. ರಿತಿಕಾ ವಂದಿಸಿದರು.