ಬೆಂಗಳೂರು: ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ತಂತ್ರಜ್ಞಾನದಲ್ಲಾಗುತ್ತಿರುವ ಕ್ಷಿಪ್ರ ಬೆಳವಣಿಗೆ ಹಾಗೂ ಮಾರುಕಟ್ಟೆಯಲ್ಲಿರುವ ಕೌಶಲ್ಯಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಮೀಡಿಯಾ ಕನೆಕ್ಟ್ ಸಂಸ್ಥಾಪಕರು ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಹೇಳಿದರು.
ಐಎಸ್ಬಿಆರ್ ಬ್ಯುಸಿನೆಸ್ ಸ್ಕೂಲ್ ಆಯೋಜಿಸಿದ್ದ ಮಾರ್ಕೆಟಿಂಗ್ ಕುರಿತಾದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಒಂದಾನೊಂದು ಕಾಲದಲ್ಲಿ ಆಸ್ಪತ್ರೆಯ ವೈದ್ಯರು ಮನೆಗಳಿಗೆ ಭೇಟಿ ನೀಡಿ ಶುಚಿತ್ವ ಮತ್ತು ಆರೋಗ್ಯ ಕಾಳಜಿ ಬಗೆಗೆ ಮಾಹಿತಿ ನೀಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಆನ್ಲೈನ್ ವೇದಿಕೆಗಳ ಮೂಲಕ ಅಂದರೆ ವಿಡಿಯೋಗಳ ಮೂಲಕವೂ ವೈದ್ಯರು ಜನರಿಗೆ ಸಲಹೆಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕವೂ ಸಂಸ್ಥೆಯೊಂದು ಮಾರ್ಕೆಟಿಂಗ್ ಸ್ಟ್ರಾಟೆಜಿ ಮಾಡಿ ಜನರನ್ನು ತಲುಪುತ್ತಿದೆ ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳು ಮಾರುಕಟ್ಟೆಯ ಅಗತ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನಿರಂತರ ಸಂಶೋಧನೆ ಮತ್ತು ವಿಶ್ಲೇಷಣೆಗಳು ಅಗತ್ಯ. ಹಾಗಾಗಿ ಈ ನಿಟ್ಟಿನಲ್ಲಿ ತಮ್ಮದೇ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಯಾವುದೇ ಯೋಚನೆಗಳಿಗೆ ಯಶಸ್ಸು ಸಿಗಬೇಕೆಂದರೆ ಅದು ಗುಣಮಟ್ಟದ್ದಾಗಿರಬೇಕು ಅದಕ್ಕಾಗಿ ತಂಡದ ಪ್ರಯತ್ನ, ನಿರಂತರ ಶ್ರಮ ಮತ್ತು ಬದ್ಧತೆ ಮುಖ್ಯವಾಗಿರುತ್ತದೆ. ಈ ದಾರಿಯಲ್ಲಿ ವಿದ್ಯಾರ್ಥಿಗಳು ಕಾರ್ಯನಿರತರಾಗಬೇಕು ಎಂದು ಸಲಹೆ ನೀಡಿದರು.
ಈ ವಿಚಾರ ಸಂಕಿರಣದಲ್ಲಿ ಅಂಕುರ್ ದಾಸ್ಗುಪ್ತ (ಚೀಫ್ ಮಾರ್ಕೆಟಿಂಗ್ ಆಫೀಸರ್, ಶಿಶಂ ಡಿಜಿಟಲ್ ಮೀಡಿಯಾ ಪ್ರೈ. ಲಿಮಿಟೆಡ್), ಆಯುಷಿ ಮೋನ (ನಿರ್ದೇಶಕರು, ಮಾರ್ಕೆಟಿಂಗ್, ಎಸ್ಎಂಇ ಬ್ಯುಸಿನೆಸ್ ಮತ್ತು ಡೈರೆಕ್ಟ್ ಡೆಲ್ಹಿವರಿ), ಅನಿತಾ ಶಂಕರ್ (ಫೌಂಡರ್, ಅಸ್ತು ಸಿಇಒ), ಶ್ರೀಧರ್ .ಎನ್. ಉಪಾಧ್ಯೆ (ಸೀನಿಯರ್ ಜನರಲ್ ಮ್ಯಾನೇಜರ್), ಡಾ. ಆನಂದ್ ಅಗರ್ವಾಲ್ (ಎಕ್ಸಿಕ್ಯುಟಿವ್ ಡೈರೆಕ್ಟರ್, ಐಎಸ್ಬಿಆರ್ ಬ್ಯುಸಿನೆಸ್ ಸ್ಕೂಲ್), ಜಯದಿಪ್ ಸಿಕ್ದರ್ (ಕನ್ಸಲ್ಟಿಂಗ್ ಸಿಎಂಒ, ಪ್ರಿಸೈನ್ಸ್ ಡಿಸಿಷನ್ ಸಲೂಷನ್ಸ್), ಶಾನ್ ಶಿಂದೆ (ಮಾರ್ಕೆಟಿಂಗ್ ಲೀಡರ್), ತನ್ಮೆ ಬಟಾಬ್ಯಾಲ್ (ಹೆಡ್ ಆಫ್ ಮಾರ್ಕೆಟಿಂಗ್, ನಿರೈಲ್ ನೆಟ್ವರ್ಕ್ಸ್) ಉಪಸ್ಥಿತರಿದ್ದರು.
ಐಎಸ್ಬಿಆರ್ ಬ್ಯುಸಿನೆಸ್ ಸ್ಕೂಲ್ನ ಆಡಳಿತ ಮಂಡಳಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.