ಬೆಂಗಳೂರು: ವಿಧಾನಸಭಾ ಚುನಾವಣೆ ಸೋಲು ಕಂಡಿರುವ ಮಾಜಿ ಸಚಿವ ಡಾ.ಕೆ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ನೀಡಲಾಗಿದೆ. ರಾಜಕೀಯ ಎದುರಾಳಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರಪ್ಪ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾನು ಹಗರಣ ಮಾಡಿಲ್ಲ ಎಂದು ನಾಳೆ ನಂದಿಭೋಗ ನಂದೀಶ್ವರ ದೇಗುಲದಲ್ಲಿ ಆಣೆ ಪ್ರಮಾಣ ಮಾಡುತ್ತೇನೆ. ಆದರೆ ಸುಧಾಕರ್ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ? ಎಂದು ಸವಾಲು ಹಾಕಿದ್ದಾರೆ.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಡಾ.ಕೆ.ಸುಧಾಕರ್ ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ಅನೇಕ ಕಂಪನಿಗಳಿಗೆ ಸುಧಾಕರ್ ಹೂಡಿಕೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಸುಧಾಕರ್ ಅವರ ಪ್ರಾಪರ್ಟಿ ಇದೆ. ಬೆಂಗಳೂರಿನ ಸದಾಶಿವನಗರದಲ್ಲಿ ಅವರ ಮನೆ ಇದೆ. ಇದೆಲ್ಲವೂ ಎಲ್ಲಿಂದ ಬಂದಿದೆ ಎಂದು ಅವರು ಹೇಳಲಿ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ್ ಕಾಂಗ್ರೆಸ್ ಸೇರಲು ಬಹಳ ಪ್ರಯತ್ನ ಮಾಡಿದರು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬರಲು ಬಹಳ ಪ್ರಯತ್ನ ಮಾಡಿದ್ದರು. ಕೆಲವು ನಾಯಕರ ಜೊತೆ ಸಿಎಂ, ಡಿಸಿಎಂ ಭೇಟಿ ಮಾಡಿಸಿ ಎಂದು ಹೇಳಿದ್ದರು. ಆದರೆ ಕೊನೆಗೆ ಸುಧಾಕರ್ ಏನು ಯೋಚನೆ ಮಾಡಿದರು ಗೊತ್ತಿಲ್ಲ. ಬಿಜೆಪಿ ಬಿಟ್ಟರೆ ಐಟಿ, ಇಡಿ ರೇಡ್ ಆಗಬಹುದು ಎಂದು ಹೆದರಿದ್ದಾರೆ ಎಂದು ಪ್ರದೀಶ್ ಈಶ್ವರ್ ಹೇಳಿದರು.