ಉಜಿರೆ: ಭಾರತದ ದೇಶದ ಬ್ಯಾಂಕಿಗ್ ಮತ್ತು ಇತರ ಸಂಸ್ಥೆಗಳ ಲಾಭದ ಶೇ.0.5 ರಷ್ಟನ್ನು ಸಮಾಜಮುಖಿ ಕೆಲಸಗಳಿಗೆ ಮೀಸಲಿಡಲಾಗಿದೆ. ಕೆನರಾ ಬ್ಯಾಂಕ್ನವರು ಸೆಲ್ಕೊ ಜೊತೆಯಲ್ಲಿ ಸೇರಿ ವಿದ್ಯಾರ್ಥಿಗಳ ಬಾಳಿಗೆ ಬೆಳಕು ಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ಬದಲಾವಣೆಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಎಸ್ಡಿಎಂ ಮಹಿಳಾ ಐ.ಟಿ.ಐ ಕಾಲೇಜಿನಲ್ಲಿ ಕೆನರಾ ಬ್ಯಾಂಕ್ ಮತ್ತು ಸೆಲ್ಕೊ ಸೋಲಾರ್ ಲೈಟ್ ಪ್ರೈ.ಲಿ ಸಹಯೋಗದೊಂದಿಗೆ ಸೋಮವಾರ ಜರುಗಿದ ಸೋಲಾರ್ ವಿದ್ಯುತ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್, ಪುತ್ತೂರಿನ ಡಿವಿಜನ್ ಮ್ಯಾನೇಜರ್ ಸರ್ವೇಶ್ ಮಾತನಾಡಿ, ಸಮಾಜಮುಖಿ ನೆಲೆಯಲ್ಲಿ ಕೆನರಾ ಬ್ಯಾಂಕ್ ಮಾಡುವ ಸಹಾಯದ ಹಿನ್ನೆಲೆಯಲ್ಲಿ ಎಸ್ಡಿಎಂ ಮಹಿಳಾ ಐ.ಟಿ.ಐ ಕಾಲೇಜಿನಲ್ಲಿ ಸೋಲಾರ್ ಘಟಕಕ್ಕಾಗಿ ಮೂರು ಲಕ್ಷದ ಸಹಾಯಧನ ನೀಡಲಾಗಿದೆ. ಕೌಶಲ್ಯವಿರುವವರಿಗೆ ಉದ್ಯೋಗ ಅವಕಾಶಗಳಿದ್ದು, ಅದಕ್ಕೆ ಬೇಕಾದ ಹಣಕಾಸಿನ ಸಹಾಯವನ್ನು ಕೆನರಾ ಬ್ಯಾಂಕ್ ಮಾಡುತ್ತದೆ ಎಂದರು.
ಸೆಲ್ಕೊ ಸೋಲಾರ್ ಲೈಟ್ ಪ್ರೈ.ಲಿ. ಮಣಿಪಾಲದ ಡಿ.ಜಿ.ಎಂ ಗುರುಪ್ರಕಾಶ್ ಶೆಟ್ಟಿ ಮಾತನಾಡಿ ” ಸೌರಶಕ್ತಿಯ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ವರ್ಷದ ಹಿಂದೆ ಇದೇ ಕಾಲೇಜಿನಲ್ಲಿ ಮಾಡಲಾಗಿತ್ತು. ಪ್ರಾಂಶುಪಾಲರು ಮತ್ತು ಕಾರ್ಯದರ್ಶಿಯವರ ಸಹಕಾರದಿಂದ ಕಾಲೇಜಿನಲ್ಲಿ ಸೋಲಾರ್ ಘಟಕ ಸ್ಥಾಪನೆಯಾಗಿದೆ. ಹವಾಮಾನ ವೈಪರೀತ್ಯಗಳಿಂದ ಪಾರಾಗಲು ಸಾಂಪ್ರದಾಯಿಕ ಶೈಲಿಯ ಶಕ್ತಿಗಳ ಕಡೆ ಗಮನ ನೀಡಬೇಕಾಗಿದ್ದು, ಸೌರಶಕ್ತಿ ಅದಕ್ಕೆ ಉತ್ತಮ ಉದಾಹರಣೆ. ಸೋಲಾರ್ ಬಳಸುವುದರಿಂದ ದೇಶ ಮತ್ತು ಭೂಮಿ ಎರಡಕ್ಕೂ ಕೊಡುಗೆ ನೀಡಿದಂತೆ ಎಂದು ತಿಳಿಸಿದರು.