ಉಜಿರೆ: ಪ್ರಾಯೋಗಿಕ ಕಲಿಕೆಯನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಕಲಿಕೆಗೆ ಪರಿಪೂರ್ಣತೆ ದೊರೆಯುತ್ತದೆ ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ನುಡಿದರು.
ಉಜಿರೆಯ ಎಸ್.ಡಿ.ಎಂ ಕಾಲೇಜಿನ ಬಿವೋಕ್ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸಿದ್ದ ‘ತಂದೆ ನೀವು ತಾಯಿ ನೀವು’ ಶೀರ್ಷಿಕೆಯ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಿಕಾ ಹಂತದಿಂದಲೇ ನೂತನ ಪ್ರಯೋಗಗಳಿಗೆ ವಿದ್ಯಾರ್ಥಿಗಳು ತಮ್ಮನ್ನು ತೆರೆದುಕೊಳ್ಳಬೇಕು. ಪ್ರಾಯೋಗಿಕ ಕಲಿಕೆಯು ವಿದ್ಯಾರ್ಥಿಗಳನ್ನು ಬಹು ಆಯಾಮಗಳಲ್ಲಿ ಯೋಚಿಸುವಂತೆ ಮಾಡುತ್ತದೆ. ಸರಿ ತಪ್ಪುಗಳಿಗೆ ಭಯ ಪಡದೇ ಅನುಭವಕ್ಕಾಗಿ ಹೊಸ ಪ್ರಯೋಗಗಳನ್ನು ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವನರಂಗ ವೇದಿಕೆಯ ಅಟೆಂಡರ್ ಪದ್ಮಾಕರ ‘ತಂದೆ ನೀವು ತಾಯಿ ನೀವು’ ಶೀರ್ಷಿಕೆಯ ಆಲ್ಬಮ್ ಸಾಂಗ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಿವ್ಯಾಹ್ನ ಭೋಜನಾಲಯ ವ್ಯವಸ್ಥಾಪಕ ರಾಘವೇಂದ್ರ ಹಾಗೂ ಸ್ವಚ್ಛತಾ ಸಿಬ್ಬಂದಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅರ್ಪಿತ್ ಸ್ವಾಗತಿಸಿದರೆ ಜಗದೀಶ್ ವಂದಿಸಿರು.
‘ತಂದೆ ನೀವು ತಾಯಿ ನೀವು’ ಶೀರ್ಷಿಕೆಯ ಆಲ್ಬಂ ಸಾಂಗ್ನ ನಿರ್ದೇಶನ ತೃತೀಯ ಬಿವೋಕ್ ವಿದ್ಯಾರ್ಥಿ ನಂದನ್ ಜಿ.ಕೆ ಅವರದ್ದು. ಮಂಜುನಾಥ ಎಲ್.ಎಲ್ ಗೀತೆ ರಚಿಸಿದ್ದಾರೆ. ಚಿನ್ಮಯ್ ಅವರ ಛಾಯಾಗ್ರಹಣ, ಸಮರ್ಥನ್ ಅವರ ಸಂಗೀತ ಸಂಯೋಜನೆ ಮತು ಗಾಯನದ ಈ ಆಲ್ಬಂ ಮನ ಸೆಳೆಯುವಂತಿದೆ. ಜೊತೆಗೆ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಅರ್ಪಿತ್ ಇಚ್ಛೆ ಈ ಆಲ್ಬಂ ನಿರ್ಮಾಣ ಹೊಣೆಗಾರಿಕೆ ನಿಭಾಯಿಸಿದ್ದಾರೆ.