ನಿಟ್ಟೆ: ‘ತಂತ್ರಜ್ಞಾನ ಮತ್ತು ಸಂವಹನದ ಚಾತುರ್ಯತೆಯಿದ್ದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಇಂದಿನ ದಿನಗಳಲ್ಲಿ ಪಠ್ಯದೊಂದಿಗೆ ವಿವಿಧ ತಾಂತ್ರಿಕ ಹಾಗೂ ವ್ಯವಸ್ಥಾಪಕ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ’ ಎಂದು ಮರ್ಸಿಡೀಸ್ & ಇಚರ್ ಸಂಸ್ಥೆಗಳಿಗೆ ಸಿಎಬಿ ಎಸ್ಸೆಂಬ್ಲಿ ಸಾಫ್ಟವೇರ್ ನ ಎಕ್ಸ್ಟರ್ನಲ್ ಕನ್ಸಲ್ಟೆಂಟ್ ಆಗಿರುವ ವಿಕ್ರಮ್ ಅರೆಕಲ್ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ವಿದ್ಯಾರ್ಥಿ ಸಂಘದ ಕಾರ್ಯಕ್ರಮವಾದ ಸ್ಯಾಮ್ಕಾ ಅನ್ಪ್ಲಗ್ಡ್ ನ್ನು ಅ.೧೪ ರಂದು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ಲೇಸ್ಮೆಂಟ್ ಎಂಬುದು ಐಟಿ ಕ್ಷೇತ್ರದಲ್ಲಿ ಅತಿಸುಲಭ ಎಂಬ ಒಂದು ಕಲ್ಪನೆಯಿದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನ ಅಭಿವೃದ್ದಿಪಡಿಸಿದರಷ್ಟೇ ಸಂಸ್ಥೆಯಲ್ಲಿ ಅವಕಾಶಗಳನ್ನು ಬಾಚಿಕೊಳ್ಳಬಹುದಾಗಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ಐ. ರಮೇಶ್ ಮಿತ್ತಂತಾಯ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮುಂದಿನ ಒಂದು ವರ್ಷಗಳ ಕಾಲ ಎಂ.ಸಿ.ಎ ವಿಭಾಗದ ವಿದ್ಯಾರ್ಥಿ ಸಂಘವು ಹಲವಾರು ಜ್ಞಾನಾಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತಿಳಿಸಿದರು. ಸಭಾ ಕಾರ್ಯಕ್ರಮದಲ್ಲಿ ಸ್ಯಾಮ್ಕಾ ವಿದ್ಯಾರ್ಥಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಿಟ್ಟೆ ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಬಲಿಪಾ ಸ್ವಾಗತಿಸಿದರು. ಎಸ್.ಎ.ಎಂ.ಸಿ.ಎ ಅಧ್ಯಕ್ಷ ವೈಶಾಖ್ ಗೌಡ ಜೆ.ಎಸ್ ವಾರ್ಷಿಕ ವರದಿ ವಾಚಿಸಿದರು. ಎಸ್.ಎ.ಎಂ.ಸಿ.ಎ ಸಂಯೋಜಕಿ ಹರ್ಷಿತಾ ಜಿ.ಎಂ ಅತಿಥಿಗಳನ್ನು ಪರಿಚಯಿಸಿದರು. ಎಸ್.ಎ.ಎಂ.ಸಿ.ಎ ಕಾರ್ಯದರ್ಶಿ ಶ್ರಾವ್ಯಾ ವಂದಿಸಿದರು. ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ವರುಣ್ ಕಾರ್ಯಕ್ರಮ ನಿರೂಪಿಸಿದರು.