ಮಂಗಳೂರು: “ಕೊಂಕಣಿ ಭಾಷೆಯು ಅತ್ಯಂತ ಸಮೃದ್ಧವಾದುದು. ಅಮ್ಮನ ಮಡಿಲಿನಿಂದ ಹಿಡಿದು ಬುದ್ದಿಮತ್ತೆಗೆ ಬರುವ ತನಕ ಕೊಂಕಣಿಯಲ್ಲೇ ಯೋಚಿಸಿ, ಸ್ಪಂದಿಸಿದ್ದು ಇಂದಿಗೂ ಅವಿಸ್ಮರಣೀಯ” ಎಂದು ಕೊಂಕಣಿ ಮಾನ್ಯತಾ ದಿನದ ಸಂಭ್ರಮದಂದು ಮುಖ್ಯ ಅತಿಥಿಗಳಾಗಿ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ದೈಜಿವರ್ಲ್ಡ್ ಸಂಸ್ಥೆಯ ನಿರ್ದೇಶಕರಾದ ವಾಲ್ಟರ್ ನಂದಳಿಕೆಯವರು ಹಂಚಿಕೊಂಡರು.
ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಕೊಂಕಣಿ ವಿಭಾಗದ ವತಿಯಿಂದ ಕೊಂಕಣಿ ಮಾನ್ಯತಾ ದಿನವನ್ನು ಗದ್ದಲದಿಂದ ಆಚರಿಸಲಾಯಿತು. ಗುಮ್ಮಟೆಯನ್ನು ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯಾಸಂಸ್ಥೆಯ ರೆಕ್ಟರ್ ವಂ. ಮೆಲ್ವಿನ್ ಪಿಂಟೊ ಎಸ್.ಜೆ. ಹಾಗೂ ಕಾಲೇಜಿನ ಪ್ರಾಶುಂಪಾಲರಾದ ವಂ. ಪ್ರವೀಣ್ ಮಾರ್ಟಿಸ್ ಎಸ್.ಜೆ.ರವರು ಮುಖ್ಯ ಅತಿಥಿಗಳೊಂದಿಗೆ ಸೇರಿ ಚಾಲನೆ ನೀಡಿದರು.
ಕೊಂಕಣಿ ಸಂಘದ ಅಧ್ಯಕ್ಷರು ಫ್ಲೋರ ಕಾಸ್ತೆಲಿನೊ, ಸೆವ್ರಿನ್ ಪಿಂಟೊ, ರಿಷಲ್, ದಿವ್ಯ ಜ್ಯೋತಿ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಜೋಯಲ್ ಕ್ರಾಸ್ತ, ಸ್ಟೀವನ್ ಅಲ್ಮೇಡಾ ವೇದಿಕೆಯಲ್ಲಿದ್ದರು. ಕಾರ್ಯದರ್ಶಿಯವರು ಸ್ವಾಗತಿಸುತ್ತಾ, ವಂದಿಸಿದರು. ಕ್ಯಾರಲ್ ಲೋಬೊ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಲೀಶ ಬ್ರಾಗ್ಸ್ ಯಶಸ್ವಿಯಾಗಿ ನಿರ್ವಹಿಸಿದರು.