ಮಂಗಳೂರು: ವಿಜ್ಞಾನದಂತೆಯೇ ಸಾಂಸ್ಕೃತಿಕ ಬದುಕಿನಲ್ಲೂ ಸತ್ಯವಿದೆ. ನಮ್ಮ ಸಂಸ್ಕೃತಿ, ಕಲೆಯ ಪಾವಿತ್ರ್ಯವನ್ನು ರಕ್ಷಿಸುವುದು ಕರ್ತವ್ಯ ಎಂದು ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು.
ಡಾ. ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಕೇಂದ್ರದ ದಶಮಾನೋತ್ಸವದ ಸಂದರ್ಭ ಮಂಗಳೂರು ವಿವಿ ಮಂಗಳಾ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ನೀತಿ ಬಿಡುಗಡೆ, ದಶಮನೋತ್ಸವ ಪ್ರಶಸ್ತಿ ಪ್ರದಾನ, ಸಮಾರಂಭದಲ್ಲಿ ಮಾತನಾಡಿದರು.
ಕ್ರೀಡೆ ಮತ್ತು ಸಾಂಸ್ಕೃತಿಕ ನೀತಿಗಳೆರಡನ್ನೂ ತನ್ನದೇ ಆದ ಮಹತ್ವವಿದೆ ಎಂದರು. ಮಂಗಳೂರು ವಿವಿಗೆ ಈ ಎರಡೂ ಅಂಶಗಳು ಕಣ್ಣುಗಳಿದ್ದಂತೆ ಎಂದು ಅವರು ಹೇಳಿದರು. ಮಕ್ಕಳನ್ನು ದೇಶದ ಸಾಂಸ್ಕೃತಿಕ ಆಸ್ತಿಯನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಎಡನೀರು ಮಠ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ, ”ಶಿಕ್ಷಣ ಸಂಸ್ಥೆಗಳು ಕಲೆ ಸಂಸ್ಕೃತಿಯನ್ನು ಬೆಂಬಲಿಸುವುದು ಆದ್ಯ ಕರ್ತವ್ಯ. ಸಾಂಸ್ಕೃತಿಕ ನೀತಿ ರೂಪಿಸಿರುವ ಮಂಗಳೂರು ವಿವಿ ಇತರ ಸಂಸ್ಥೆಗಳಿಗೆ ಮಾದರಿ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಉಪಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ, ಯಕ್ಷಗಾನ ಕೇಂದ್ರವು ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತನ್ನು ತಿಳಿಸಿಕೊಡುತ್ತಿದೆ. ಯಕ್ಷಗಾನ ಎಂದೆಂದಿಗೂ ಪ್ರಸ್ತುತ ಎಂಬ ಸಂದೇಶವನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಒತ್ತಿಹೇಳುತ್ತದೆ. ವಿದ್ಯಾರ್ಥಿಗೆ ಸಮಗ್ರ ಶಿಕ್ಷಣಕ್ಕೆ ಸಾಂಸ್ಕೃತಿಕ ನೀತಿ ಸಹಾಯ ಮಾಡುತ್ತದೆ ಎಂದರು. ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿಯ ಸದಸ್ಯ ಪ್ರೊ. ರವಿಶಂಕರ್ ಮಾತನಾಡಿ ಹೊಸ ಸಾಂಸ್ಕೃತಿಕ ನೀತಿಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕ ಎಂದರು.
ದಶಮಾನೋತ್ಸವ ಪ್ರಶಸ್ತಿ ಪ್ರದಾನ: ಹಿರಿಯ ಯಕ್ಷಗಾನ ಕಲಾವಿದರಾದ ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ, ಸುಬ್ರಹ್ಮಣ್ಯ ಧಾರೇಶ್ವರ, ಕುರಿಯ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಹರಿನಾರಾಯಣ ಬೈಪಾಡಿತ್ತಾಯ, ಅರುವ ಕೊರಗಪ್ಪ ಶೆಟ್ಟಿ, ಶಿವರಾಮ ಜೋಗಿ, ಕುಂಬಳೆ ಶ್ರೀಧರ ರಾವ್, ಆರಗೋಡು ಮೋಹನ್ ದಾಸ್ ಶೆಣೈ, ಪೇತ್ರಿ ಮಾಧವ ನಾಯಿಕ, ಬಳ್ಕೂರು ಕೃಷ್ಣ ಯಾಜಿ, ಮುಖ್ಯಪ್ರಾಣ ಕಿನ್ನಿಗೋಳಿ, ಉಬರಡ್ಕ ಉಮೇಶ್ ಶೆಟ್ಟಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಪ್ಪಂಗಳ ಡಾ. ಶಂಕರನಾರಾಯಣ ಭಟ್, ಡಾ.ಚಂದ್ರಶೇಖರ ದಾಮ್ಲೆ ದಶಮಾನೋತ್ಸವ ಪ್ರಶಸ್ತಿ ಸ್ವೀಕರಿಸಿದರು.
ಹಿರಿಯ ಕಲಾವಿದರಾದ ಪುಂಡರೀಕಾಕ್ಷ ಉಪಾಧ್ಯ ಮತ್ತು ದಯಾನಂದ ನಾಗೂರು 2021-22ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದರು.
ಶ್ರೀಕೃಷ್ಣ ಚರಿತ್ರೆ ಕೃತಿಗಾಗಿ ಡಾ.ಡಿ.ಸದಾಶಿವ ಭಟ್ಟ ಅವರು ‘ಯಕ್ಷಮಂಗಲ ಕೃತಿ’ ಪ್ರಶಸ್ತಿ ಸ್ವೀಕರಿಸಿದರು. ವಿದ್ವಾಂಸರಾದ ಪ್ರೊ.ಪಾದೇಕಲ್ಲು ವಿಷ್ಣು ಭಟ್ಟ, ಪ್ರೊ.ಎಂ.ಎಲ್. ಸಾಮಗ ಹಾಗೂ ಡಾ.ಧನಂಜಯ ಕುಂಬ್ಳೆ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ ವಂದಿಸಿದರು.