ಮಂಗಳೂರು: ಭಾರತ ದೇಶ ಸಾವಿರ ಕಂಬದ ಚಪ್ಪರ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲು ನಾವು ಇದಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ನೆನಪಿಕೊಳ್ಳುವ, ಅಮೂಲ್ಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಕುರಿತು ಚಿಂತಿಸುವ ಕ್ಷಣ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಐಕ್ಯೂಎಸಿ, ಇತಿಹಾಸ ವಿಭಾಗ ಮತ್ತು ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗಗಳು, ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗ ಹಾಗೂ ಸಮಾಜಶಾಸ್ತ್ರ ವಿಭಾಗಗಳ ಸಹಯೋಗದೊಂದಿಗೆ, ʼಆಝಾದಿ ಕ ಅಮೃತ್ ಮಹೋತ್ಸವ್ʼ ಭಾಗವಾಗಿ ರವೀಂದ್ರ ಕಲಾಭವನದಲ್ಲಿ ಬುಧವಾರ ನಡೆದ ʼಕರಾವಳಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಪುನರ್ ಮನನʼ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿಕಾರಿ, ಅಹಿಂಸಾತ್ಮಕ, ಸಾಹಿತ್ಯಾತ್ಮಕ, ಸಮಾಜ ಸುಧಾರಣೆ, ಸಂತ- ಮಹನೀಯರ ಮಾರ್ಗದರ್ಶನ ಎಂಬ ಐದು ವಿಧದ ಹೋರಾಟವನ್ನು ನೆನಪಿಸಿಕೊಂಡರು.
ತಮ್ಮ ದಿಕ್ಸೂಚಿ ಭಾಷಣದಲ್ಲಿ, ಗೋವಾ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎನ್ ಶ್ಯಾಮ್ ಭಟ್, ಕರಾವಳಿಯ ಸಾಮಾಜಿಕ- ಧಾರ್ಮಿಕ ಸುಭಾರಣೆ, ರಾಜಕೀಯ ಜ್ಞಾನ, ರಾಷ್ಟ್ರೀಯವಾದ, ಶಿಕ್ಷಣ ಸಂಸ್ಥೆಗಳು, ಮುದ್ರಣ ಕಲೆ ಜೊತೆಗೆ ಹಲವರ ತ್ಯಾಗ ಕರಾವಳಿಯ ಸ್ವಾತಂತ್ರ್ಯ ಹೋರಾಟದ ಪ್ರಭಾವ ಬೀರಿದ ಬಗೆಯನ್ನು ವಿವರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಂ.ಲೋಕೇಶ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ ಬಲಿದಾನದ ಜೊತೆಗೆ, ಸ್ವಾತಂತ್ರ್ಯ ಉಳಿಸಿಕೊಳ್ಳಲು ಬಲಿದಾನಗೈದ ಲಕ್ಷಾಂತರ ಯೋಧರನ್ನು ನೆನಪಿಸಿಕೊಳ್ಳಬೇಕು. ಭಾರತ ಒಂದು ಸ್ವತಂತ್ರ್ಯ ದೇಶವಾಗಿ ಉಳಿಯಲು ಅವರೂ ಕಾರಣ. ಇದೊಂದು ಆತ್ಮವಿಮರ್ಶೆ ಮಾಡಿಕೊಳ್ಳಲು, ಮುಂದಿನ ದಾರಿಯ ಬಗ್ಗೆ ಯೋಚಿಸಲು ಸಕಾಲ, ಎಂದರು.
ಇತಿಹಾಸ ವಿಭಾಗದ ವಿದ್ಯಾರ್ಥಿಗಳಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರಾಂಶುಪಾಲೆ ಡಾ.ಅನುಸೂಯ ರೈ ಅತಿಥಿಗಳನ್ನು ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಚಾಲಕ ಡಾ.ಜಯರಾಜ್ ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ಮತ್ತು ಪುರಾತತ್ವ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಕುಮಾರಸ್ವಾಮಿ ಎಂ ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ.ನಾಗರತ್ನ ಎನ್.ರಾವ್ ಧನ್ಯವಾದ ಸಮರ್ಪಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಗಾಯತ್ರಿ ಎನ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಆರ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಿನಯ್ ರಜತ್ ಡಿ ಹಾಗೂ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ನಾಗೇಶ್ ತಾಂತ್ರಿಕ ಸೆಷನ್ಗಳನ್ನು ನಡೆಸಿಕೊಟ್ಟರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಬಿಹಾರದ ಪಾಟ್ನಾದ ಬರಹಗಾರ ಪ್ರೊ. ಇಂದು ಜುಂಜುನ್ವಾಲಾ ಸಮಾರೋಪ ಸಮಾರಂಭದ ಅತಿಥಿಯಾಗಿದ್ದರು.