ಮಂಗಳೂರು: ಜಿಲ್ಲೆಯ ಐದು ವಲಯಗಳ ಸರಕಾರಿ ಪ್ರೌಢ ಶಾಲೆಗಳಿಗೆ ಮಂಗಳೂರಿನ ಬಿಎಎಸ್ಎಫ್ ಇಂಡಿಯಾ ಲಿ. ಇವರಿಂದ ರಸಾಯನಶಾಸ್ತ್ರದ ಪ್ರಯೋಗಗಳಿಗೆ ಬೇಕಾದ ಕಿಟ್ಗಳನ್ನು ನೀಡುವ ಕಾಠ್ಯಕ್ರಮ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಿತು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಈ ಪ್ರಸ್ತಾವನೆಯನ್ನು ಬಿಎಎಸ್ಎಫ್ ಕಂಪನಿಯು ತನ್ನ ಸಿಎಸ್ಆರ್ ನಿಧಿಯಲ್ಲಿ ಭರಿಸಿ ಅನುಮೋದನೆ ನೀಡಿತ್ತು. ಅದರಂತೆ ಸಂತ ಅಲೋಶಿಯಸ್ ರಸಾಯನಶಾಸ್ತ್ರ ವಿಭಾಗದ ಡಾ| ರಿಚರ್ಡ್ ಗೊನ್ಸಾಲ್ವಿಸ್ ಅವರ ನೇತೃತ್ವದಲ್ಲಿ ಸಿದ್ಧಪಡಿಸಲಾಗಿತ್ತು. ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಪುತ್ತೂರು ಮತ್ತು ಸುಳ್ಯ ವಲಯದ ಸರಕಾರಿ ಪ್ರೌಢಶಾಲೆಗಳಿಗೆ 90 ಕಿಟ್ಗಳನ್ನು ಪ್ರದಾನಿಸಲಾಯಿತು.
ಫ್ಯಾಕ್ಟರೀಸ್ ಮತ್ತು ಬಾಯಲರ್ಸ್ನ ಡೆಪ್ಯುಟಿ ಡೈರೆಕ್ಟರ್ ರಾಜೇಶ್ ಮಿಶ್ರಕೋಟಿ ಮಾತನಾಡಿ, ದ.ಕ.ದ ಬಿಎಎಸ್ಎಫ್ ಕಂಪನಿಯ ಈ ಯೋಜನೆ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದಲ್ಲಿ ಅಭಿರುಚಿ ಬೆಳೆಯಬೇಕಾದರೆ ಪ್ರಯೋಗ, ಪ್ರಾತ್ಯಕ್ಷಿಕೆಗಳು ಮುಖ್ಯ ಎಂದರು.
ಬಿಎಎಸ್ಎಫ್ ನ ಸೈಟ್ ಡೈರೆಕ್ಟರ್ ಶ್ರೀನಿವಾಸ್ ಪ್ರಾಣೇಶ್ ಮಾತನಾಡಿ, ನಾವು ರಸಾಯನಶಾಸ್ತ್ರದ ಕರ್ತೃಗಳು, ದಿನನಿತ್ಯದ ಜೀವನದಲ್ಲಿ ರಾಸಾಯನಿಕಗಳನ್ನು ಬಳಸುವ ನಾವು ಅವುಗಳಿಲ್ಲದೆ ಬದುಕಲು ಸಾಧ್ಯವಿಲ್ಲದ ಹಂತ ತಲುಪಿದ್ದೇವೆ. ಆದ್ದರಿಂದ ಅವುಗಳ ಬಗ್ಗೆ ಪೂರ್ಣ ತಿಳುವಳಿಕೆ ಅವಶ್ಯ ಎಂದರು. ಕಾಲೇಜಿನ ಪ್ರಾಂಶುಪಾಲ ವಂ. ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಹತ್ತಿರ ತರುವ ಇಂತಹ ಪ್ರಯತ್ನ ಶ್ಲಾಘನೀಯ ಎಂದರು.
ಕಂಪೆನಿಯ ಸುರಕ್ಷೆ ಮತ್ತು ಪರಿಸರ ವಿಭಾಗದ ಮ್ಯಾನೇಜರ್ ನಾಗರಾಜ್ ಹೆಚ್.ಎಸ್. ಅವರು ‘ಪ್ರಯೋಗ ಶಾಲೆಯಲ್ಲಿ ರಾಸಾಯನಿಕಗಳ ಸುರಕ್ಷೆ’ ಎಂಬ ಬಗ್ಗೆ ಉಪನ್ಯಾಸವಿತ್ತರು.
ರಸಾಯನಶಾಸ್ತ್ರದ ಉಪನ್ಯಾಸಕಿ ಪ್ರೀಮಾ ಪಾಯ್ಸ್ ಅವರು ಸ್ವಾಗತಿಸಿದರು. ಡಾ. ರಿಚರ್ಡ್ ಗೊನ್ಸಾಲ್ವಿಸ್ ಕಿಟ್ಗಳ ಬಗ್ಗೆ ವಿವರಿಸಿದರು. ಡಾ. ಕೆ.ವಿ. ರಾವ್ ವಂದಿಸಿದರು.