ಮಂಗಳೂರು: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 33ನೇ ಪದವಿ ಪ್ರದಾನ ಸಮಾರಂಭ ಶನಿವಾರ ಬೆಳಗ್ಗೆ 10.00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಿತು.
ಸಮಾರಂಭದಲ್ಲಿ 97 ಪದವಿ ವಿದ್ಯಾರ್ಥಿಗಳಿಗೆ ಹಾಗೂ 18 ಸ್ನಾತಕೋತ್ತರ ಪದವೀದರರಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ವಿನಾಯಕ ಮಿಷನ್ ರಿಸರ್ಚ್ ಫೌಂಡೇಶನ್, ಡೀಮ್ಡ್ ಟು. ಬಿ. ಯುನಿವರ್ಸಿಟಿ. ಸೇಲಂ, ತಮಿಳುನಾಡು ಇದರ ಉಪಕುಲಪತಿಯಾದ ಡಾ. ಪಿ. ಕೆ. ಸುಧೀರ್ ಮುಖ್ಯ ಅತಿಥಿಯಾಗಿ ಪ್ರಮಾಣ ಪತ್ರ ವಿತರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸಂಸ್ಥೆಯ ನಿರ್ದೇಶಕರಾದ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಹೋಮಿಯೋಪಥಿ ವೈದ್ಯಪದ್ದತಿಯು ಜಗತ್ತಿನಾದ್ಯಂತ 65 ದೇಶಗಳಲ್ಲಿ ಜನಪ್ರಿಯಗೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ವಿಶ್ವದಲ್ಲಿ 2ನೇ ಅತೀ ದೊಡ್ಡ ವೈದ್ಯ ಪದ್ದತಿಯೆಂದು ಗುರುತಿಸಲಾಗಿದೆ ಎಂದು ತಿಳಿಸಿದರು. ಹಲವು ರ್ಯಾಂಕ್ ಹಾಗೂ ಚಿನ್ನದ ಪದಕವನ್ನು ಗಳಿಸುವುದರ ಮೂಲಕ ಸಂಸ್ಥೆಯ ಹೆಮ್ಮೆಗೆ ಕಾರಣರಾಗಿರುವ ಪದವೀಧರರನ್ನು ಅಭಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ವಾರ್ಷಿಕ ವರದಿಯಲ್ಲಿ 2022-23ರಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು ಮತ್ತು ಪದವಿ ಸ್ವೀಕರಿಸಿದ ಹೋಮಿಯೋಪಥಿ ವೈದ್ಯರ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾದ ಡಾ. ಪಿ. ಕೆ. ಸುಧೀರ್ ರವರು ಪದವಿ ಪ್ರಧಾನ ಸಮಾರಂಭದ ಸಂದೇಶದೊಂದಿಗೆ ಪ್ರತಿಷ್ಠಿತ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಸಿಕ್ಕಿದ ಅವಕಾಶಕ್ಕಾಗಿ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಫಾದರ್ ಮುಲ್ಲರ್ ಸಂಸ್ಥೆಯಲ್ಲಿನ ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡು ಅಂದಿನ ನಿರ್ದೇಶಕರು, ಆಡಳಿತಾಧಿಕಾರಿಗಳು ಹೋಮಿಯೋಪಥಿ ಕಾಲೇಜು ಬೆಳೆಸಲು ಪಟ್ಟ ಪರಿಶ್ರಮವನ್ನು ಸ್ಮರಿಸಿದರು. ಘಟಿಕೋತ್ಸವದ ದಿನವು ಪ್ರತಿ ಪದವೀಧರರ ಜೀವನದಲ್ಲಿ ಸ್ಮರಣೀಯ ದಿನ ಹಾಗೂ ಈ ದಿನಕ್ಕಾಗಿ ಅವರ ಪರಿಶ್ರಮ ಹಾಗೂ ಪೋಷಕರ ಬೆಂಬಲವನ್ನು ಶ್ಲಾಘಿಸಿದರು.
ಪದವೀಧರರ ಪರವಾಗಿ ಡಾ. ದರ್ಶನಾ ಪದ್ಮನಾಭನ್ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ 2 ಚಿನ್ನದ ಪದಕವನ್ನು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರೆ ಡಾ. ಆಶ್ರಿತಾ ಬಿ.ಎ. ಹಾಗೂ ಮತ್ತೊಂದು ಚಿನ್ನದ ಪದಕವನ್ನು ಸ್ನಾತಕೋತ್ತರ ಪದವಿಯ ಮೆಟಿರಿಯಾ ಮೆಡಿಕಾ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿರುವ ಡಾ. ರೆಮ್ಯಾ ವರ್ಗೀಸ್ ಪಡೆದಿದ್ದು ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಅಕ್ಟೋಬರ್ 2022 ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ 10 ಸ್ನಾತಕೋತ್ತರ ವಿದ್ಯಾರ್ಥಿಗಳನ್ನೂ ಬಿಷಪ್ ಸನ್ಮಾನಿಸಿದರು. ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯ ಅತ್ಯುತ್ತಮ ಪ್ರಬಂದ ಮಂಡಣೆಗಾಗಿ ನೀಡಿರುವ ವಿದ್ಯಾರ್ಥಿವೇತನವನ್ನು ನಮ್ಮ ಕಾಲೇಜಿನ 2018-19 ರ ಹೋಮಿಯೋಪಥಿ ಸೈಕ್ಯಾಟ್ರಿ ವಿಭಾಗದ ಡಾ. ಸುದಿಪ್ತಿ ಸಿಂಗ್ ಪಡೆದರು.
6ನೇ ಮುಲ್ಲೇರಿಯನ್ ಬ್ಯಾಚ್ ಪ್ರಾಯೋಜಿಸಿದ ‘ಡಾ. ಸುಮೊದ್ ಜಾಕೊಬ್ ಸೊಲೊಮನ್ ಪ್ರಶಸ್ತಿ’ಯನ್ನು 2019-20 ಬ್ಯಾಚ್ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ರೆಮ್ಯಾ ವರ್ಗೀಸ್ ರವರಿಗೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹ ಪ್ರತಿಷ್ಠಿತ ಅಧ್ಯಕ್ಷೀಯ ಚಿನ್ನದ ಪದಕವನ್ನು ಅತ್ಯುತ್ತಮ ಸಾಧನೆ ಮಾಡಿದ ಹೋಮಿಯೋಪಥಿ ಪದವಿ ವಿದ್ಯಾರ್ಥಿನಿ ಡಾ. ಜಿದ್ದು ಸಾಯಿ ಅಖಿಲ ಅವರಿಗೆ ಹಾಗೂ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿಯನ್ನು ಡಾ. ಸ್ಟೆಫಿ ವರ್ಗೀಸ್ ಗೆ ನೀಡಿ ಗೌರವಿಸಿದರು.
ಬಿಷಪ್ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವೀಧರರನ್ನು ಅಭಿನಂದಿಸಿ, ಹೋಮಿಯೋಪಥಿ ವೈದ್ಯ ಪದ್ಧತಿಯು ವಿಶ್ವದ ಎರಡನೇ ಅತೀ ದೊಡ್ಡ ಪದ್ಧತಿಯೆಂದು ಪರಿಗಣಿಸಲ್ಪಟ್ಟರೂ ಇದನ್ನು ಮುಂದುವರೆಸಲು ಅನೇಕ ಅಡೆ ತಡೆಗಳನ್ನು ದಾಟಿ ಹೋಗಬೇಕು. ಉದಯೋನ್ಮುಖ ವೈದ್ಯರು ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅದನ್ನು ತೆರವುಗೊಳಿಸಬಹುದು ಎಂದು ಪದವೀಧರರಿಗೆ ಒತ್ತಿ ಹೇಳಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ರೋಶನ್ ಕ್ರಾಸ್ತಾ ವಂದಿಸಿದರು. ಡಾ. ದೀಪಾ ರೆಬೆಲ್ಲೊ ಹಾಗೂ ಡಾ. ಮನಿಷ್ ಎಸ್ ತಿವಾರಿ ರವರು ಪದವಿ ಪ್ರದಾನ ಕಾರ್ಯಕ್ರಮವನ್ನು ನಿರೂಪಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ, ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ರಂಜನ್ ಕ್ಲೆಮೆಂಟ್ ಬ್ರಿಟ್ಟೊ ಉಪಸ್ಥಿತರಿದ್ದರು.