ಪುತ್ತೂರು: ಬರೀ ಸೈನಕ್ಕೆ ಸೇರಿ ಗಡಿ ಕಾಯುವುದು ಅಥವ ಉಗ್ರರೊಡನೆ ಹೋರಾಡುವುದು ಮಾತ್ರ ದೇಶಸೇವೆ ಅಲ.್ಲ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ ನಮ್ಮ ಸಮಾಜಕ್ಕೆ ಹಾಗೂ ದೇಶಕ್ಕೆ ಒಳಿತಾಗುವಂತೆ ನಡೆದುಕೊಳ್ಳುವುದು ಕೂಡ ಅತ್ಯುತ್ತಮ ದೇಶಸೇವೆ ಎಂದು ಪುತ್ತೂರಿನ ಮಾಜಿ ಸೈನಿಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಜಗನ್ನಾಥ ಎಂ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ಸಂಸ್ಥೆಯ ವಿದ್ಯಾರ್ಥಿಗಳು ಇತ್ತೀಚೆಗೆ ಕಾಶ್ಮೀರದಲ್ಲಿ ವೀರಸ್ವರ್ಗ ಪಡೆದ ಸೈನಿಕರ ಕುಟುಂಬಸ್ಥರಿಗಾಗಿ ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸೈನಿಕರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರ ಶ್ರಮಕ್ಕೆ ಬೆಲೆ ಕೊಟ್ಟು ಅವರ ಸಹಾಯಕ್ಕೆ ನಿಧಿ ಸಂಗ್ರಹಿಸಿರುವ ಅಂಬಿಕಾದ ವಿದ್ಯಾರ್ಥಿಗಳ ಮನೋಧರ್ಮ ಶ್ಲಾಘನೀಯ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಸೈನಿಕರ ಬಗೆಗೆ ಅಪಾರ ಗೌರವವನ್ನು ಹೊಂದಿ ವಿದ್ಯಾರ್ಥಿಗಳಲ್ಲೂ ಅಂತಹ ಉತ್ಕೃಷ್ಟ ಭಾವನೆಯನ್ನು ತುಂಬುವಲ್ಲಿ ಶ್ರಮಿಸುತ್ತಿವೆ. ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿ ನಿರ್ಮಿಸಿ ಹುತಾತ್ಮರಿಗೆ ಗೌರವ ತೋರಿದ ಅಂಬಿಕಾ ಸಂಸ್ಥೆಯ ಮಹತ್ತರ ಕಾರ್ಯ ಗಮನಾರ್ಹವಾದದ್ದು ಎಂದು ನುಡುದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ನೆಲ್ಲಿಕಟ್ಟೆಯ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಮಾತನಾಡಿ ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳು ಸೈನಿಕರ ಕ್ಷೇಮಾಭಿವೃದ್ಧಿಗೆ ತಮ್ಮಿಂದಾದ ಸಹಕಾರವನ್ನು ನೀಡಿ ಮಾದರಿಯೆನಿಸಿದ್ದಾರೆ. ಈ ನಡುವೆ ಅಂಬಿಕಾ ವಿದ್ಯಾಲಯ ಸಿಬಿಎಸ್ಸಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಂಟನೇ ತರಗತಿಯ ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಕೊರೋನ ಸಮಯದಲ್ಲಿ ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ರೂಪಾಯಿ 5000 ಮೊತ್ತವನ್ನು ಸೈನಿಕ ಕಲ್ಯಾಣ ನಿಧಿಗೆ ನೀಡಿರುವುದು ತುಂಬಾ ಸಂತೋಷಕರ ವಿಚಾರ. ಇಂತಹ ನಡೆ ಅನುಕರಣೀಯ ಹಾಗೂ ವಿದ್ಯಾರ್ಥಿಗಳೆಲ್ಲರೂ ಇಂತಹ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ದೇಶ ಸೇವೆ ಮಾಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ದೇಶದ ಗಡಿಯಲ್ಲಿ ಸೈನಿಕರು ಹಗಲಿರುಳು ದುಡಿಯುವುದರಿಂದ ನಾವಿಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯ. ಅವರನ್ನು ನಮ್ಮ ಕುಟುಂಬದವರಂತೆ ಭಾವಿಸಿ ನಾವು ಅವರ ಕಷ್ಟಗಳಿಗೆ ಸ್ಪಂದಿಸಬೇಕು. ಹುತಾತ್ಮರಾದ ವೀರ ಸೈನಿಕರ ಕುಟುಂಬಗಳಿಗೆ ಸಹಾಯ ನೀಡುತ್ತಿರುವುದು ಪುಣ್ಯದ ಕೆಲಸ ಹಾಗೂ ಇದು ನಮ್ಮ ಸಂಸ್ಥೆಯ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಶಂಕರನಾರಾಯಣ ಭಟ್, ಸಂಸ್ಥೆಯ ಉಪನ್ಯಾಸಕ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆರ್ಯ ಹಿಮಾಲಯ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು. ಕಾರ್ಯಕ್ರಮ ಆಯೋಜನಾ ಘಟಕದ ಸಂಯೋಜಕ ನಮೃತ್ ಜಿ ಉಚ್ಚಿಲ ಕಾರ್ಯಕ್ರಮಕ್ಕೆ ಸಹಕರಿಸಿದರು.
ದೇಶಕ್ಕೆ ಒಳಕಿತಾಗುವಂತೆ ನಡೆಯುವುದು ಕೂಡ ಅತ್ಯುನ್ನತ ದೇಶಪ್ರೇಮ : ಜಗನ್ನಾಥ ಎಂ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.