ಮಂಗಳೂರು: ನಗರದ ಬಿಜೈ ಕಾಪಿಕಾಡ್ನ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (ಸಿಎಫ್ಎಎಲ್) ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಅಡಿಗ ಅವರು 2022ರ ಏಷಿಯನ್ ಪೆಸಿಫಿಕ್ ಮೆಥಮೆಟಿಕಲ್ ಒಲಂಪಿಯಾಡ್ನಲ್ಲಿ ದೇಶವನ್ನು ಪ್ರತಿನಿಧಿಸಲು ಅಗ್ರ 10 ಭಾರತೀಯ ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಎಫ್ಎಎಲ್ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮೊರಾಸ್ ಅವರು, ‘ಶ್ರೇಯಸ್ ಆಯ್ಕೆ ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ. ಸಂಸ್ಥೆಯ ಸ್ಥಾಪಕಿ ಸೆವೆರಿನ್ ರೊಜಾರಿಯೊ, ಪ್ರಾಧ್ಯಾಪಕರು ಕಾಳಜಿ, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಂದ ಜಯವಾಗಿದೆ. ಒಲಿಂಪಿಯಾಡ್ನಲ್ಲಿ ಭಾರತ ಜಾಗತಿಕವಾಗಿ ಆರನೇ ಸ್ಥಾನದಲ್ಲಿದೆ’ ಎಂದರು.
ಶ್ರೇಯಸ್, ಈಗಾಗಲೇ ಚೆನ್ನೈನ ಮ್ಯಾಥಮೆಟಿಕಲ್ ಇನ್ಸ್ಟಿಟ್ಯೂಟ್ಗೆ (ಸಿಎಂಐ) ಪ್ರವೇಶ ಪಡೆದಿದ್ದಾರೆ.ಇದು ದೇಶದ ಗಣಿತ ವಿಜ್ಞಾನದ ಪ್ರಮುಖ ಸಂಸ್ಥೆಯಾಗಿದೆ. ಇನ್ನೂ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದರು.
ಶ್ರೇಯಸ್ ಅಡಿಗ ಮಾತನಾಡಿ, ‘ಮೊದಲಿನಿಂದ ಗಣಿತದಲ್ಲಿ ಆಸಕ್ತಿ ಇತ್ತು. 8ನೇ ತರಗತಿಯಲ್ಲಿದ್ದಾಗಲೇ ಸಿಎಫ್ಎಎಲ್ಗೆ ಸೇರಿ, ವಿಶೇಷ ಮಾರ್ಗದರ್ಶನ ಪಡೆದೆ. ಸಂಸ್ಥೆ ನಡೆಸುವ ಜೂನಿಯರ್ ರಾಮಾನುಜಂ ಸ್ಪರ್ಧೆಯಲ್ಲಿ ಭಾಗವಹಿಸಿ ಗಣಿತವನ್ನು ಮತ್ತಷ್ಟು ಸರಳವಾಗಿ ಕಲಿಯುವುದನ್ನು ರೂಢಿಸಿಕೊಂಡೆ. ಇದು ಈ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗೆಲುವು ದಾಖಲಿಸಲು ನೆರವಾಯಿತು’ ಎಂದರು.
ಸಿಎಫ್ಎಎಲ್ನ ಪ್ರಾಧ್ಯಾಪಕ ಡಾ.ಶ್ರೀಕಾಂತ್ ಪೈ ಮಾತನಾಡಿ, ‘ಇತ್ತೀಚೆಗೆ ಪ್ರಕಟವಾದ ಎನ್ಟಿಎಸ್ಇ ಫಲಿತಾಂಶದಲ್ಲಿ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. 2021ರಲ್ಲಿ ನಡೆದ ಜೆಇಇ- ಮೇನ್ ಪರೀಕ್ಷೆಯಲ್ಲಿ ಜಿಲ್ಲೆಯ 20 ಟಾಪರ್ಗಳು ಸಿಎಫ್ಎಎಲ್ ವಿದ್ಯಾರ್ಥಿಗಳಾಗಿದ್ದರೆ’ ಎಂದರು. ಉಪಪ್ರಾಂಶುಪಾಲ ಗೌರೀಶ್ ರಾಜ್, ಸಿಎಫ್ಎಎಲ್ನ ಗಣಿತ ಸಂಯೋಜಕ ಫ್ರೆಡ್ಡಿ ಡಿಸೋಜ, ಶ್ರೇಯಸ್ ಅಡಿಗ ತಂದೆ ಡಾ. ಸಚ್ಚಿದಾನಂದ ಅಡಿಗ ಇದ್ದರು.