ಯಾವುದೇ ಸಂಸ್ಥೆ ಶಿಸ್ತುಬದ್ಧವಾಗಿ ಮುನ್ನಡೆಯಬೇಕಾದರೆ ಅಲ್ಲಿರುವ ವಸ್ತುಗಳ ವಿವರಗಳನ್ನೊಳಗೊಂಡ ದಾಖಲೆ ಅತ್ಯಂತ ಅಗತ್ಯ. ಸರ್ಕಾರಿ ಕಾಲೇಜುಗಳಲ್ಲಿ ಇಂತಹ ವಿಚಾರ ಕಡ್ಡಾಯವಾಗಿ ಜಾರಿಯಲ್ಲಿದೆ. ಖಾಸಗಿ ವ್ಯವಸ್ಥೆಯಲ್ಲೂ ಆಯಾ ಶಿಕ್ಷಣ ಸಂಸ್ಥೆಗಳ ವಸ್ತುಗಳ ವಿವರವನ್ನು ವರ್ಷಕ್ಕೊಮ್ಮೆ ದಾಖಲಾತಿ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಂಡರೆ ಸಂಸ್ಥೆಗೆ ಒದಗಬಹುದಾದ ನಷ್ಟ ಇಲ್ಲವಾಗುತ್ತದೆ ಎಂದು ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಕ್ಯಾಂಪಸ್ ನಿರ್ದೇಶಕ ಭಾಸ್ಕರ ಶೆಟ್ಟಿ ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗಾಗಿ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ‘ಸುವಸ್ತು ಮತ್ತು ಸುವ್ಯವಸ್ಥೆ’ ಎಂಬ ವಿಷಯದ ಬಗೆಗೆ ಬುಧವಾರ ಮಾತನಾಡಿದರು.
ಒಂದೇ ಆಡಳಿತ ವ್ಯವಸ್ಥೆಗೆ ಸೇರಿಕೊಂಡಿರುವ ಅನೇಕ ಶಿಕ್ಷಣ ಸಂಸ್ಥೆಗಳಿದ್ದಾಗ ಯಾವ ವಸ್ತುಗಳು ಯಾವ ಸಂಸ್ಥೆಗಳಲ್ಲಿವೆ ಎಂಬುದನ್ನು ಪಟ್ಟಿಮಾಡಿಕೊಳ್ಳಬೇಕು. ಇದರಿಂದ ಆಯಾ ಸಂಸ್ಥೆಯ ಪ್ರಾಚಾರ್ಯರಿಗೂ ಕಾರ್ಯನಿರ್ವಹಿಸುವುದಕ್ಕೆ ಅನುಕೂಲವೆನಿಸುತ್ತದೆ. ಇಲ್ಲದಿದ್ದರೆ ಯಾರೋ ಮಾಡುವ ತಪ್ಪಿಗೆ ಸಂಸ್ಥೆಯ ಮುಖ್ಯಸ್ಥರು ಹೊಣೆಗಾರರಾಗಬೇಕಾದ ಪರಿಸ್ಥಿತಿ ಬರಬಹುದು. ವ್ಯವಹಾರದ ಪಾರದರ್ಶಕತೆಗೆ ಕೆಲವೊಂದು ಕ್ರಮಗಳ ಅನಿವಾರ್ಯತೆಯಿದೆ. ಅದರಲ್ಲೂ ಒಂದು ಹುದ್ದೆಗೆ ಮತ್ತೊಬ್ಬ ವ್ಯಕ್ತಿ ಬಂದಾಗಲಂತೂ ವಸ್ತು ವಿಷಯಗಳ ಕುರಿತಾದ ದಾಖಲಾತಿ ಪುಸ್ತಕ ಸಾಕಷ್ಟು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಷ್ಟೆಯಿಂದ ಮಾಡಿಕೊಂಡಾಗ ಸಂಸ್ಥೆ ಸುಲಲಿತವಾಗಿ ಮುಂದುವರಿಯುವುದಕ್ಕೆ ಸಾಧ್ಯ. ಬೆಳವಣಿಗೆಯ ವೇಗಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರಲ್ಲದೆ ಎಲ್ಲರಲ್ಲೂ ಒಂದೊಂದು ಪ್ರತಿಭೆ ಅಥವ ಯೋಗ್ಯತೆ ಇರುತ್ತದೆ. ಅದನ್ನು ಗುರುತಿಸುವವರಿದ್ದಾಗ ಸಂಸ್ಥೆಗೆ ಪ್ರಯೋಜನವಾಗುತ್ತದೆ ಎಂದು ನುಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲ ರಾಮಚಂದ್ರ ಭಟ್ ಉಪಸ್ಥಿತರಿದ್ದು ಮಾಹಿತಿ ವಿನಿಮಯ ಮಾಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.
ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಸುವಸ್ತು ಮತ್ತು ಸುವ್ಯವಸ್ಥೆ’ ಕುರಿತಾಗಿ ಉಪನ್ಯಾಸ ಯಾವುದೇ ಸಂಸ್ಥೆಯಲ್ಲಿ ಅಲ್ಲಿನ ವಸ್ತುಗಳ ವಿವರ ಇರಬೇಕು : ಭಾಸ್ಕರ ಶೆಟ್ಟಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.