ನಂಜನಗೂಡು: ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಜೆಎಸ್ಎಸ್ ಕಾಲೇಜಿನ ಮತಗಟ್ಟೆಯನ್ನು ತೆಂಗಿನ ಗರಿಯ ಚಪ್ಪರ ಹಾಕಿ ಮಾವು, ಬಾಳೆ, ತಳಿರು ತೋರಣಗಳಿಂದ ಸಿಂಗರಿಸಿ, ಬಿಳಿ ಪಂಚೆ, ಶರ್ಟಿನ ಜೊತೆ ಮೈಸೂರು ಪೇಟ ಧರಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದರು.
ಪ್ರಜಾಪ್ರಭುತ್ವ ಹಬ್ಬದ ಆಚರಣೆಗೆ ಸಾಂಸ್ಕೃತಿಕ ಸೌರಭ ಎಂಬ ಮತಗಟ್ಟೆ ತೆರೆದು ವಿನೂತನವಾಗಿ ಅಧಿಕಾರಿಗಳು ಮತದಾನ ಮಾಡಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯುವ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಖಿ, ರೈತ ಮತ್ತು ಯುವ ಮತಗಟ್ಟೆಗಳನ್ನು ತೆರೆಯಲಾಗಿದೆ. ಇಲ್ಲಿ ಮತಗಟ್ಟೆಗೆ ತೆಂಗಿನ ಗರಿಯ ಚಪ್ಪರಹಾಕಿ ಮಾವು ಬಾಳೆ ಕಟ್ಟಿ ಸ್ವಾಗತಿಸಲಾಯಿತು. ಚುನಾವಣಾ ಕರ್ತವ್ಯ ಅಧಿಕಾರಿಗಳ ಈ ಒಂದು ಪ್ರಜಾಪ್ರಭುತ್ವದ ಹಬ್ಬದ ಕಾರ್ಯವೈಕರಿಗೆ ಹ್ಯಾಟ್ಸಾಫ್ ಎನ್ನುತ್ತಾರೆ ಮತದಾರರು.