ಯಾದಗಿರಿ: ಪಿಎಸ್​ಐ ಪರಶುರಾಮ ಅವರ ಅನುಮಾನಾಸ್ಪದ ಸಾವು ರಾಜ್ಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ. ಪ್ರತಿಭಟನೆ, ಆಕ್ರೋಶ ಇದೆಲ್ಲದರ ನಡುವೆಯೇ ಈಗ ಪಿಎಸ್​ಐ ಪರಶುರಾಮ ಅಂತ್ಯಕ್ರಿಯೆ ಅವರ ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿದೆ.

ಮೃತದೇಹ ಹುಟ್ಟೂರಿಗೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು,ಪಿಎಸ್‌ಐ ಅನುಮಾನಾಸ್ಪದ ಸಾವು ಖಂಡಿಸಿ ಸ್ವಗ್ರಾಮದಲ್ಲಿ ಪ್ರತಿಭಟನೆಯೂ ನಡೆಯಿತು. ಗ್ರಾಮಕ್ಕೆ ಸಚಿವ ಶಿವರಾಜ್ ತಂಗಡಗಿ ಬಂದು ಅಂತಿಮ ದರ್ಶನ ಪಡೆದರು. ಈ ವೇಳೆ ನಮಗೆ ನ್ಯಾಯ ಬೇಕು, ತಪ್ಪಿತಸ್ಥರನ್ನು  ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಲಾಯಿತು.

ಯಾದಗಿರಿಯಿಂದ ಸೋಮನಾಳಕ್ಕೆ ಜೀರೋ ಟ್ರಾಫಿಕ್​ನಲ್ಲಿ ಮೃತದೇಹ ಪೊಲೀಸ್ ಇಲಾಖೆಯವರು ತೆಗೆದುಕೊಂಡು ಬಂದರು. ಸರ್ಕಾರಿ ಶಾಲೆಯ ಎದುರುಗಡೆ ಇರುವ ಅವರ ಜಮೀನಿನಲ್ಲಿ ಪರಶುರಾಮ್ ಅವರ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು.