ಅಥೆನ್ಸ್: ಗ್ರೀಕ್ ದೇಶದಲ್ಲಿ ಇದುವರೆಗೆ ಪ್ರವಾಹಕ್ಕೆ 15 ಮಂದಿ ಬಲಿಯಾಗಿದ್ದು, ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಪರಿಹಾರ ಕ್ರಮಗಳ ಮೊದಲ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ರಾಷ್ಟ್ರೀಯ ಪ್ರಸಾರಕ ಇಆರ್ಟಿ ವರದಿ ಮಾಡಿದೆ.
ಮಿಟ್ಸೊಟಾಕಿಸ್ 2 ನೇ ಬಾರಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು ಸರಕಾರ ಜನರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಮನೆಗಳ ಮರುನಿರ್ಮಾಣ, ಕೃಷಿ ಭೂಮಿ ರಕ್ಷಣೆಗೆ ಸರ್ಕಾರ ಆದ್ಯತೆ ಒದಗಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತವಾಗಿದೆ ಎಂದು ಮಿಟ್ಸೊಟಾಕಿಸ್ ಹೇಳಿದ್ದಾರೆ.
ಡೇನಿಯಲ್” ಚಂಡಮಾರುತ ಸೆ.4ರಿಂದ ಎರಡು ದಿನಗಳ ಕಾಲ ಗ್ರೀಸ್ ಗೆ ಅಪ್ಪಳಿಸಿದ್ದು, ಹಲವಾರು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿದೆ. ಸೆ.7 ರಂದು ಪ್ರವಾಹ ಇಳಿಮುಖವಾಗಿದ್ದು, ಕೆಲ ಪ್ರದೇಶಗಳಲ್ಲಿ ದೋಣಿಗಳು ಮತ್ತು ಹೆಲಿಕಾಪ್ಟರ್, ಡ್ರೋನ್ಗಳ ಮೂಲಕ ಜನರಿಗೆ ಆಹಾರ, ನೀರು ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದೆ.
ಸೆಪ್ಟೆಂಬರ್ 5 ರಿಂದ ಒಟ್ಟು 4,486 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ದಳ ಭಾನುವಾರ ಸಂಜೆ ತಿಳಿಸಿದೆ. ಅಥೆನ್ಸ್ನ ರಾಷ್ಟ್ರೀಯ ವೀಕ್ಷಣಾಲಯದ ಅಂದಾಜಿನ ಪ್ರಕಾರ, 70,000 ಹೆಕ್ಟೇರ್ಗಿಂತಲೂ ಹೆಚ್ಚು ಭೂಮಿ ಜಲಾವೃತವಾಗಿದೆ.