ಜಕಾರ್ತಾ: ಇಂಡೋನೇಷ್ಯಾದ ಉತ್ತರ ಜಕಾರ್ತಾದಲ್ಲಿರುವ ಇಂಧನ ಶೇಖರಣಾ ಕೇಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ಇತರ ಸಂತ್ರಸ್ತರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಉತ್ತರ ಜಕಾರ್ತಾದ ಪೊಲೀಸ್ ಕಚೇರಿಯ ಹಿರಿಯ ಆಯುಕ್ತ ಗಿಡಿಯನ್ ಆರಿಫ್ ಸೆಟಿಯಾವನ್ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ಇಂಧನ ಶೇಖರಣಾ ಕೇಂದ್ರವನ್ನು ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಸಂಸ್ಥೆ ಪಿಟಿ ಪೆರ್ಟಾಮಿನಾ ನಿರ್ವಹಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
“ಪ್ರಸ್ತುತ, ಪಿಟಿ ಪೆರ್ಟಾಮಿನಾ ಬೆಂಕಿಯನ್ನು ನಿಲ್ಲಿಸುವ ಮತ್ತು ಈ ಪ್ರದೇಶದ ಕಾರ್ಮಿಕರು ಮತ್ತು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸುತ್ತಿದೆ” ಎಂದು ಪಿಟಿ ಪೆರ್ಟಮಿನಾ ಹೇಳಿಕೆಯಲ್ಲಿ ತಿಳಿಸಿದೆ.