ಕೊಲಂಬೊ : ಶ್ರೀಲಂಕಾದಲ್ಲಿ ಹದಗೆಟ್ಟಿರುವ ಅರ್ಥವ್ಯವಸ್ಥೆಯನ್ನು ಖಂಡಿಸಿ ಸರಕಾರಿ ವಿರೋಧಿ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಮಧ್ಯೆಯೇ, ಕಾನೂನು ಸುವ್ಯವಸ್ಥೆ ಕಾಪಾಡಲು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿರುವುದಾಗಿ ಅಧ್ಯಕ್ಷ ಗೊತಬಯ ರಾಜಪಕ್ಸ ಶುಕ್ರವಾರ ಘೋಷಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಲ್ಲಿ ದ್ವೀಪರಾಷ್ಟ್ರದಲ್ಲಿ 2ನೇ ಬಾರಿ ತುರ್ತು ಪರಿಸ್ಥಿತಿ ಜಾರಿಗೊಂಡಿದೆ. ಶುಕ್ರವಾರ ಮಧ್ಯರಾತ್ರಿಯಿಂದ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಎಪ್ರಿಲ್ 1ರಂದು ಶ್ರೀಲಂಕಾ ಸರಕಾರ ತುರ್ತು ಪರಿಸ್ಥಿತಿ ಜಾರಿಗೊಳಿಸಿತ್ತು. ತುರ್ತು ಪರಿಸ್ಥಿತಿ ಸಂದರ್ಭ ಪ್ರತಿಭಟನಾಕಾರರನ್ನು ಬಂಧಿಸಲು ಮತ್ತು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧ್ಯಕ್ಷರಿಗೆ ವ್ಯಾಪಕ ಅಧಿಕಾರವಿರುತ್ತದೆ. ಎಪ್ರಿಲ್ 5ರಂದು ಆಡಳಿತಾರೂಢ ಮೈತ್ರಿಕೂಟ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡ ಬಳಿಕ ಅಧ್ಯಕ್ಷರು ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಿದ್ದರು.
ಈ ಮಧ್ಯೆ, ಶ್ರೀಲಂಕಾದ ಕಾರ್ಮಿಕ ಸಂಘಟನೆಗಳು ಶುಕ್ರವಾರದಿಂದ ದೇಶವ್ಯಾಪಿ ಮುಷ್ಕರ ಆರಂಭಿಸಿದ್ದು ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರಕಾರದ ರಾಜೀನಾಮೆಗೆ ಆಗ್ರಹಿಸಿವೆ. ಆರೋಗ್ಯ ಮತ್ತು ಬಂದರು ಕ್ಷೇತ್ರದ ಕಾರ್ಮಿಕ ಸಂಘಟನೆಗಳೂ ಮುಷ್ಕರಕ್ಕೆ ಕೈಜೋಡಿಸಿವೆ. 2000ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು ತಮ್ಮೊಂದಿಗೆ ಕೈಜೋಡಿಸಿವೆ.
ಅಧ್ಯಕ್ಷರು ಮತ್ತು ಸರಕಾರ ರಾಜೀನಾಮೆ ನೀಡಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ. ಬೇಡಿಕೆ ಈಡೇರದಿದ್ದರೆ ಮೇ 11 ರಿಂದ ಸರಕಾರ ರಾಜೀನಾಮೆ ನೀಡುವವರೆಗೆ ಪ್ರತಿಭಟನೆ ಆರಂಭವಾಗಲಿದೆ ಎಂದು ಪ್ರತಿಭಟನಾ ಕಾರ್ಮಿಕ ಸಂಘಟನೆಗಳ ಸಹಸಂಯೋಜಕ ರವಿ ಕುಮುದೇಶ್ ಹೇಳಿದ್ದಾರೆ. ಮುಷ್ಕರಕ್ಕೆ ಬೆಂಬಲ ಸೂಚಕವಾಗಿ ಶುಕ್ರವಾರ ಬೆಳಿಗ್ಗೆ 1 ಗಂಟೆ ದೇಶದ ಎಲ್ಲಾ ಮಂದಿರ, ಚರ್ಚ್ ಗಳಲ್ಲಿ ಗಂಟೆ ಬಾರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಅಧ್ಯಕ್ಷರು ಹಾಗೂ ಸರಕಾರದ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು ಶುಕ್ರವಾರ ಸಂಸತ್ ಭವನಕ್ಕೆ ನುಗ್ಗಲು ಮುಂದಾದಾಗ ಪೊಲೀಸರು ತಡೆದು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿ ಅವರನ್ನು ಚದುರಿಸಲು ಪ್ರಯತ್ನಿಸಿದರು ಎಂದು ವರದಿಯಾಗಿದೆ.
ಪ್ರತಿಭಟನಾಕಾರರು ಸಂಸತ್ ಭವನಕ್ಕೆ ಮುತ್ತಿಗೆ ಹಾಕಿದ್ದರಿಂದ ಹಲವು ಸಂಸದರು ಸಂಸತ್ ನಿಂದ ಹೊರತೆರಳಲು ಅಸಾಧ್ಯವಾಗಿದೆ. ಸಂಸತ್ ಭವನದ ಎಲ್ಲಾ ದ್ವಾರಗಳನ್ನೂ ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ ಎಂದು ಪ್ರಮುಖ ವಿಪಕ್ಷ ಸಮಗಿ ಜನ ಬಲವೆಗಯ ಪಕ್ಷದ ಸಂಸದ ಹರಿನ್ ಫೆರ್ನಾಂಡೊ ಹೇಳಿದ್ದಾರೆ.
ಮಂಗಳವಾರ ತಮ್ಮ ಪಕ್ಷ ಸಲ್ಲಿಸಿದ್ದ ಅವಿಶ್ವಾಸ ನಿರ್ಣಯದ ಬಗ್ಗೆ ಸಂಸತ್ ನಲ್ಲಿ ಮತದಾನ ನಡೆಯುವವರೆಗೆ ತಮ್ಮ ಪಕ್ಷ ಸಂಸತ್ ಕಲಾಪದಿಂದ ದೂರ ಉಳಿಯಲಿದೆ ಎಂದು ಫೆನಾರ್ಂಡೊ ಹೇಳಿದ್ದಾರೆ.