ಕೊಲಂಬೋ: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಜನರು ದಂಗೆ ಎದ್ದು, ಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ನಿವಾಸದ ಎದುರು ಪ್ರತಿಭಟನೆ ನಡೆಸಿದ 45 ಮಂದಿಯನ್ನು ಬಂಧಿಸಲಾಗಿದೆ.
ಪ್ರತಿಭಟನೆ ಹಿಂಸೆಗೆ ತಿರುಗಿ, ಘಟನೆಯಲ್ಲಿ 5 ಮಂದಿ ಪೊಲೀಸರು ಗಾಯಗೊಂಡರೆ, ಅನೇಕ ಸರ್ಕಾರಿ ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಕೊಲಂಬೋದ ಹಲವು ಭಾಗಗಳಲ್ಲಿ ಹೇರಲಾಗಿದ್ದ ರಾತ್ರಿ ಕರ್ಪ್ಯೂ ಅನ್ನು ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ತೆರುವುಗೊಳಿಸಲಾಗಿದೆ.
ಪ್ರತಿಭಟನೆಗೆ ಕಾರಣರಾದ 45 ಮಂದಿಯನ್ನು ಕೊಲಂಬೋ ಪೊಲೀಸರು ಬಂಧಿಸಿದ್ದಾರೆ. ಕೊಲಂಬೊ ಉತ್ತರ, ದಕ್ಷಿಣ, ಕೊಲಂಬೊ ಸೆಂಟ್ರಲ್, ನುಗೆಗೋಡ, ಮೌಂಟ್ ಲ್ಯಾವಿನಿಯಾ ಮತ್ತು ಕೆಲನಿಯಾ ಪೊಲೀಸ್ ವಿಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ನಿನ್ನೆ ರಾಜಧಾನಿ ಕೊಲಂಬೋದಲ್ಲಿರುವ ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ ಲಂಕಾ ಅಧ್ಯಕ್ಷರನ್ನು ಉದ್ದೇಶಿಸಿ, ಪ್ರತಿಭಟನಾಕಾರರು ‘ಮೂರ್ಖ, ಹುಚ್ಚ ಮನೆಗೆ ಹೋಗು’ ಎಂದು ಕೂಗುತ್ತಿರುವುದದು ಕಂಡುಬಂದಿದೆ. ರಾಜಪಕ್ಸೆ ಕುಟುಂಬದ ಎಲ್ಲಾ ಸದಸ್ಯರು ಅಧಿಕಾರದಿಂದ ಕೆಳಗಿಳಿಯುವಂತೆ ಜನರು ಒತ್ತಾಯಿಸಿದರು.
ದೇಶವು ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವಾಗ ವಾರಗಳಿಂದ ಆಹಾರ ಮತ್ತು ಅಗತ್ಯ ವಸ್ತುಗಳು, ಇಂಧನ ಮತ್ತು ಅನಿಲದ ನಿರ್ಣಾಯಕ ಕೊರತೆಯಿದೆ ಎಂದು ಜನರು ಹೇಳಿದ್ದಾರೆ. ಇಂಧನವನ್ನು ಆಮದು ಮಾಡಿಕೊಳ್ಳಲು ವಿದೇಶಿ ಕರೆನ್ಸಿಯ ಕೊರತೆಯಿಂದಾಗಿ ದೇಶದ ಹಲವು ಭಾಗಗಳು 13 ಗಂಟೆಗಳವರೆಗೆ ವಿದ್ಯುತ್ ಕಡಿತದಿಂದ ಹೆಣಗಾಡುತ್ತಿವೆ.
ಈ ಬಿಕ್ಕಟ್ಟು ಕೆಟ್ಟ ಸಮಯದಲ್ಲಿ ತೆರಿಗೆ ಕಡಿತ ಮತ್ತು ದುರ್ಬಲವಾದ ಸರ್ಕಾರಿ ಹಣಕಾಸು ವ್ಯವಸ್ಥೆ ಮತ್ತು ಕರೊನಾ ವೈರಸ್ ಸಾಂಕ್ರಾಮಿಕದ ಪ್ರಭಾವದ ಪರಿಣಾಮವಾಗಿದೆ.